ಬೆಂಗಳೂರು, ಡಿ.10- ಕನ್ನಡ ಚಿತ್ರೋದ್ಯಮ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯುವಂತಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶಿಸಿದರು. ನಗರದ ಶಿವಾನಂದ ವೃತ್ತದ ಬಳಿ ಇರುವ ಗಾಂಧಿ ಭವನದ ಎದುರು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಬಹಳಷ್ಟು ಒಳ್ಳೆಯ ಚಿತ್ರಗಳು ಬಂದಿವೆ. ಇನ್ನಷ್ಟು ಅತ್ಯುತ್ತಮ ಕನ್ನಡ ಚಲನಚಿತ್ರಗಳು ಬಂದು ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಲಿ ಎಂದು ಹಾರೈಸಿದರು. ನಿರ್ಮಾಪಕರ ಸಂಘ ಅಪಾರ ಕೊಡುಗೆ ನೀಡಿದೆ. ನಿರ್ಮಾಪಕರು ಸದಭಿರುಚಿಯ ಚಿತ್ರಗಳನ್ನು ನೀಡಲಿ. ವಿಶ್ವಮಟ್ಟದಲ್ಲಿ ಕನ್ನಡ ಚಿತ್ರೋದ್ಯಮ ಗಮನ ಸೆಳೆಯಲಿ. ಚಿತ್ರರಂಗದ ಜತೆ ಸರ್ಕಾರ ಸದಾ ಇರುತ್ತದೆ ಎಂದು ಹೇಳಿದರು.
ಕೋವಿಡ್-19 ಲಾಕ್ಡೌನ್ನಿಂದಾಗಿ ಚಿತ್ರೋದ್ಯಮ ಸಂಕಷ್ಟಕ್ಕೀಡಾಗಿದೆ. ಶೀಘ್ರವೇ ಚೇತರಿಸಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಸಿಎಂ ತಿಳಿಸಿದರು. ಕೃಷಿ ಸಚಿವ ಹಾಗೂ ನಿರ್ಮಾಪಕ ಬಿ.ಸಿ.ಪಾಟೀಲ್ ಮಾತನಾಡಿ, ನಿರ್ಮಾಪಕ ಉಳಿದರೆ ಕನ್ನಡ ಚಿತ್ರರಂಗ ಉಳಿಯುತ್ತದೆ ಎಂದು ಹೇಳಿದರು. ಅಣ್ಣಾವ್ರು ನಿರ್ಮಾಪಕರನ್ನು ಅನ್ನದಾತರು ಎಂದು ಕರೆಯುತ್ತಿದ್ದರು. ಹಾಗಾಗಿ ಇಂದಿನ ಕಾಲಘಟ್ಟದಲ್ಲಿ ನಿರ್ಮಾಪಕರು ಉಳಿಯಬೇಕು, ಕನ್ನಡ ಚಿತ್ರರಂಗ ಬೆಳೆಯಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ನಾವೆಲ್ಲ ನಿರ್ಮಾಪಕರು ಒಗ್ಗಟ್ಟಿನಿಂದ ಇರಬೇಕು. ಒಂದು ಚಿತ್ರಕ್ಕೆ ನಿರ್ಮಾಪಕನೇ ಜೀವಾಳ ಎಂದು ಹೇಳಿದರು. ನಿರ್ಮಾಪಕ ಜವಾಬ್ದಾರಿಯುತವಾಗಿ ಪ್ರೀತಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಚಿತ್ರ ಹಾಗೂ ಚಿತ್ರರಂಗ ಉಳಿಯಲು ಸಾಧ್ಯ ಎಂದು ತಿಳಿಸಿದರು.
ನಾವೆಲ್ಲ ಒಗ್ಗೂಡಿ ಈ ಕಟ್ಟಡ ನಿರ್ಮಾಣ ಮಾಡೋಣ. ಮುಖ್ಯಮಂತ್ರಿಗಳೇ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಪಾಲ್ಗೊಂಡಿದ್ದರು. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ನಟಿ ತಾರಾ ಅನುರಾಧಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಕೆಸಿಎನ್ ಚಂದ್ರಶೇಖರ್, ಹಿರಿಯ ನಿರ್ಮಾಪಕರಾದ ಸಂದೇಶ್ ನಾಗರಾಜ್, ಫಿಲಂ ಛೇಂಬರ್ ಅಧ್ಯಕ್ಷ ಜಯರಾಜು, ಉಪಾಧ್ಯಕ್ಷ ಬಣಕಾರ್, ಗೌರವ ಕಾರ್ಯದರ್ಶಿ ಎನ್.ಎಂ.ಸುರೇಶ್,
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ಕುಮಾರ್, ಉಪಾಧ್ಯಕ್ಷ ರಾಮಮೂರ್ತಿ, ಗೌರವ ಕಾರ್ಯದರ್ಶಿ ಕೆ.ಮಂಜು, ನಿರ್ಮಾಪಕರಾದ ರಮೇಶ್ ಯಾದವ್, ಎ.ಗಣೇಶ್, ಬಾ.ಮಾ.ಹರೀಶ್, ಬಾ.ಮಾ.ಗಿರೀಶ್, ಬಿ.ಆರ್.ಕೇಶವ್ ಸೇರಿದಂತೆ ಹಲವಾರು ನಿರ್ಮಾಪಕರು, ಚಿತ್ರರಂಗದ ಗಣ್ಯರು ಹಾಜರಿದ್ದರು.