ಬೆಂಗಳೂರು, ಡಿ.6- ಹಲವು ಸಚಿವರು ಹಾಗೂ ಶಾಸಕರ ಇತ್ತೀಚಿನ ಬಹಿರಂಗ ಹೇಳಿಕೆಗಳು ನೋವುಂಟು ಮಾಡಿದ್ದು, ಪಕ್ಷದ ಸಿದ್ಧಾಂತ, ಶಿಸ್ತಿನ ಚೌಕಟ್ಟಿನ ಉಲ್ಲಂಘನೆ ಮಾಡಿರುವವರಿಗೆ ಕೂಡಲೇ ಕಡಿವಾಣ ಹಾಕುವಂತೆ ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ರಾಜ್ಯ ನೂತನ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪಕ್ಷದ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾದ ಸುನಿಲ್ ಕುಮಾರ್, ಮಂತ್ರಿ ಮಂಡಲ ರಚನೆ, ನಿಗಮ-ಮಂಡಳಿಗಳಿಗೆ ನೇಮಕ ಕುರಿತು ಎದ್ದಿರುವ ಅಸಮಾಧಾನ ಹೊಗಲಾಡಿಸಬೇಕೆಂದು ಕೋರಿದ್ದಾರೆ. ಪಕ್ಷದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಶಾಸಕರ ಸಭೆ ಕರೆಯಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಪತ್ರ ಬರೆದಿದ್ದ ಬೆನ್ನಲ್ಲೇ ಇಂದು ಅರುಣ್ ಸಿಂಗ್ ಅವರ ಜೊತೆ ಚರ್ಚೆ ಮಾಡಿರುವುದು ಮಹತ್ವ ಪಡೆದುಕೊಂಡಿದೆ.
ಕೆಲವು ದಿನಗಳಿಂದ ನಮ್ಮ ಮಂತ್ರಿಗಳು, ಶಾಸಕ ಸ್ನೇಹಿತರು ಮತ್ತು ಪ್ರಮುಖರ ಬಹಿರಂಗ ಹೇಳಿಕೆಗಳು ಸಮಾಧಾನ ತರುವಂತದ್ದಲ್ಲ. ಒಂದು ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಯ ಕರ್ತರಿಗೆ, ಹಿತೈಷಿಗಳ ಮನಸ್ಸಿಗೆ ಈ ರೀತಿ ಬಹಿರಂಗ ಹೇಳಿಕೆಗಳು ನೋವುಂಟು ಮಾಡುತ್ತವೆ ಎಂದಿದ್ದಾರೆ.
ಮೂಲ-ಹೊಸಬರು ಎಂಬ ಭಾವನೆ ವ್ಯಕ್ತ ಮಾಡದೇ ಪಕ್ಷದ ಶಿಸ್ತಿನ ಚೌಕಟ್ಟನ್ನು ಎಲ್ಲರಿಗೂ ಗಟ್ಟಿಯಾಗಿ ಹೇಳಲೇಬೇಕಿದೆ. ಇದನ್ನು ತಕ್ಷಣ ನೀವು ಮಾಡುವಿರಿ ಎಂದು ನಾನು ಭಾವಿಸುತ್ತೇನೆ. ನಿಗಮ ಮಂಡಳಿ ನೇಮಕ, ಮಂತ್ರಿ ಮಂಡಲ ಸೇರಿದಂತೆ ಪಕ್ಷದ ಚೌಕಟ್ಟಿನಲ್ಲಿ ನಮ್ಮಂತಹ ಶಾಸಕರು ಅಭಿಪ್ರಾಯ ಹಂಚಿಕೊಳ್ಳಬೇಕಿದೆ.