ಬೆಳಗಾವಿ: ವಾಶಿಂಗ್ ಮಷಿನ್ ರಿಪೇರಿ ಮಾಡುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕಂಗ್ರಾಳಿ ಕೆ.ಎಚ್. ವಿಶಾಲ ಗಲ್ಲಿಯ ಮಾರುತಿ ಪರಶುರಾಮ ಜಾಧವ (೨೬), ವೈಭವ ನಗರದ ಶುಭಂ ರಾಜು ಬಾತಖಂಡೆ (೨೫) ಬಂಧಿತರು.
ನ. 30 ರಂದು ರಾತ್ರಿ 9 ಗಂಟೆಗೆ ಶಿವಾಜಿ ನಗರದ ಶೋಭಾ ಗುರುರಾವ್ ಕಾಥವಟೆ ಎಂಬುವವರ ಮನೆಗೆ ವಾಶಿಂಗ್ ಮಶಿನ್ ರಿಪೇರಿ ಮಾಡುವುದಾಗಿ ಬಂಧಿತ ಇಬ್ಬರು ಆಗಮಿಸಿದ್ದು, ಶೋಭಾ ಅವರ ಬಾಯಿ ಮುಚ್ಚಿ ಹಲ್ಲೆ ಮಾಡಿದ್ದಾರೆ. ಕೊರಳಲ್ಲಿಯ ಬಂಗಾರದ ಮಂಗಳಸೂತ್ರ, ಬಂಗಾರದ ಚೈನ್, ಬಂಗಾರದ ಬಳೆಗಳನ್ನು ಅಪಹರಿಸಿದ್ದಾರೆ.
ಶೋಭಾ ಅವರ ಪತಿ ಗುರುರಾವ ಕಾಥವಟೆ ಅವರ ತಲೆ ಜಜ್ಜಿ ಗಾಯಗೊಳಿಸಿದ್ದರು. ಅವರ ಕೊರಳಲ್ಲಿಯ ಬಂಗಾರದ ಚೈನ್, ಕೈಬೆರಳಲ್ಲಿಯ ಬಂಗಾರದ ಉಂಗುರ ಹಾಗೂ 25 ಸಾವಿರ ರೂ.ನಗದು ತೆಗೆದುಕೊಂಡು ಪರಾರಿಯಾಗಿದ್ದರು. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ಆಧರಿಸಿ ಆರೋಪಿತರನ್ನು ಪೊಲೀಸರು ಬಂಧಿಸಿದ್ದು, 3.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.