ಬೆಂಗಳೂರು: ಕೆಜಿಎಫ್ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ನಲ್ಲಿ ಸೆಟ್ಟೇರಲಿರುವ ಹೊಸ ಸಿನಿಮಾ ಘೋಷಣೆಯಾಗಿದ್ದು, ಟಾಲಿವುಡ್ ನಟ ಪ್ರಭಾಸ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಾಗಿ ಪ್ರಶಾಂತ್ ನೀಲ್ ಘೋಷಿಸಿದ್ದಾರೆ.
ಈಗಾಗಲೇ ಕೆಜಿಎಫ್ ಚಾಪ್ಟರ್-1 ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದು, ಕೆಜಿಎಫ್-2 ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಭಾರತೀಯ ಸಿನಿರಂಗದಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸಿದೆ. ಇದೇ ವೇಳೆ ಕೆಜಿಎಫ್ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಯಾವ ಚಿತ್ರ ಮಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಈ ಕುತೂಹಲಕ್ಕೆ ಇದೀಗ ತೆರೆಬಿದ್ದಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಪ್ಯಾನ್ ಇಂಡಿಯಾ ಮೂವಿ ಘೋಷಣೆಯಾಗಿದೆ.
ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹೀರೋ ಆಗಿ ಅಭಿನಯಿಸಲಿದ್ದಾರೆ. ಜೊತೆಗೆ ನೀಲ್-ಪ್ರಭಾಸ್ ಜೋಡಿಯ ಮೊದಲ ಸಿನಿಮಾಗೆ ಸಲಾರ್ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಕೆಜಿಎಫ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರ ಸಿದ್ಧವಾಗಲಿದೆ.
ಹೊಸ ಚಿತ್ರದ ಘೋಷಣೆ ಬೆನ್ನಲ್ಲೇ ಯುಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಎಕೆ-47 ಗನ್ ಹಿಡಿದುಕೊಂಡು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆಯಾಗಿದೆ. ಜೊತೆಗೆ ಅತ್ಯಂತ ಹಿಂಸಾತ್ಮಕ ಮನುಷ್ಯ, ಆತ ಒಬ್ಬನೇ, ಆದರೆ ಆತ ಬಹಳ ವೈಲೆಂಟ್ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಬಾಹುಬಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.