ನವದೆಹಲಿ,ಡಿ.1-ಕೇಂದ್ರದ ಹೊಸ ಕೃಷಿ ನೀತಿ ವಿರೋಧಿಸಿ ರೈತರು ಹಮ್ಮಿಕೊಂಡಿರುವ ಚಳವಳಿ ಯಶಸ್ಸಿಗಾಗಿ ರಾಜಧಾನಿಯಲ್ಲಿರುವ ಗುರುದ್ವಾರಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ರೈತರಿಗೆ ಮಾರಕವಾಗಿರುವ ಕೃಷಿ ನೀತಿಯನ್ನು ಸರ್ಕಾರ ಈ ಕೂಡಲೇ ಹಿಂಪಡೆಯಬೇಕು. ಕೃಷಿಕರ ಹೋರಾಟ ಯಶಸ್ವಿಯಾಗಬೇಕು ಎಂಬ ಉದ್ದೇಶದಿಂದ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಗುರುದ್ವಾರ ವ್ಯವಸ್ಥಪನಾ ಮಂಡಳಿ ಮಂಜಿಂದರ್ ಸಿಂಗ್ ತಿಳಿಸಿದ್ದಾರೆ.
ಹೋರಾಟ ನಡೆಸುತ್ತಿರುವ ರೈತರನ್ನು ಖಲಿಸ್ತಾನಿಗಳು ಹಾಗೂ ಭಯೋತ್ಪಾದಕರಿಗೆ ಹೋಲಿಸಿರುವ ಬಿಜೆಪಿ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿರುವ ಸಿಂಗ್ ಅವರು ಪ್ರತಿಭಟನೆ ನಡೆಸುತ್ತಿರುವ ರೈತನ ಮಗನೊಬ್ಬ ಕಾಶ್ಮೀರದಲ್ಲಿ ಹುತಾತ್ಮನಾಗಿದ್ದಾನೆ. ಅಂತಹ ಮಹಾನ್ ವ್ಯಕ್ತಿಗಳನ್ನು ಉಗ್ರರು ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 6ನೆ ದಿನಕ್ಕೆ ಕಾಲಿಟ್ಟಿದೆ. ಆದರೂ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಲಾದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈತರ ಮನ್ ಕೀ ಬಾತ್ ಆಲಿಸಬೇಕು ಎಂದು ಸಿಂಗ್ ಮನವಿ ಮಾಡಿಕೊಂಡಿದ್ದಾರೆ.