ಬೆಳಗಾವಿ : ನಿವಾರ್ ಚಂಡಮಾರುತ ಪರಿಣಾಮದಿಂದ ಬೆಳಗಾವಿ ನಗರದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಹಗುರ ಮತ್ತು ಸಾಧಾರಣ ಪ್ರಮಾಣದ ಮಳೆಯಾಗಿತ್ತಿದೆ.
ಬೆಳಗಾವಿಯಲ್ಲೂ ನಿವಾರ್ ತನ್ನ ಪ್ರಭಾವ ಬೀರಿದ್ದು, ಹಲವೆಡೆ ಬೆಳಿಗ್ಗೆಯಿಂದಲೇ ತುಂತುರು ಮಳೆ ಆರಂಭವಾಗಿದೆ. ಮೊಡ ಮುಸುಕಿದ ವಾತಾವರಣ, ಕೊರಿಯುವ ಚಳಿಗೆ ಜನ ಹೈರಾಣಾಗಿದ್ದಾರೆ. ಜೊತೆಗೆ ತುಂತುರು ಮಳೆ ಸೇರಿ ಜನ ಮನೆಗಳಿಂದ ಹೊರ ಬರದಂತೆ ಮಾಡಿದೆ.
ಮುಂಜಾನೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೂ ಮೋಡ ಕವಿದ ವಾತಾವರಣ ಇದೆ. 11 ಗಂಟೆಯ ಸುಮಾರಿಗೆ ಧಾರವಾಡ, ಬೆಳಗಾವಿ ಸೇರಿ ರಾಜ್ಯದ ಹಲವೆಡೆ ಚುಮು ಚುಮು ಮಳೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ನಿವಾರ್ ಚಂಡಮಾರುತ ಪರಿಣಾಮದಿಂದ ನಿರೀಕ್ಷಿತ ಪ್ರಮಾಣದ ಮಳೆ ರಾಜ್ಯದಲ್ಲಿ ಆಗಲಿಲ್ಲ. ಭೂ ಸ್ಪರ್ಶವಾದ ನಂತರ ಚಂಡಮಾರುತ ದುರ್ಬಲಗೊಳ್ಳಬೇಕಿತ್ತು. ಆದರೆ ಅದು ಮತ್ತೆ ಸಮುದ್ರಕ್ಕೆ ಹೋಗಿರುವುದರಿಂದ ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ಮುಂದಿನ ವಾರ ಮತ್ತೆ ಮಳೆ ಬರುವ ಮುನ್ಸೂಚನೆಗಳಿರುವುದರಿಂದ ರೈತರಿಗೆ ತೊಂದರೆಯಾಗಲಿದೆ. ಬೆಳೆ ಹಾನಿಯೂ ಉಂಟಾಗಬಹುದು. ಡಿಸೆಂಬರ್ ಮೊದಲೆರಡು ವಾರದಲ್ಲಿ ಚಳಿಯ ಪ್ರಮಾಣವೂ ಹೆಚ್ಚಾಗುವ ನಿರೀಕ್ಷೆ ಕಂಡು ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.