ಬೆಂಗಳೂರು: ಕೌಟುಂಬಿಕವಾಗಿ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಪತ್ನಿ ಜಾಹ್ನವಿ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗಿನಿಂದಲೇ ಅವರು ಸ್ವಲ್ಪ ಬೇಜಾರಾಗಿದ್ದರು. ಸಂಜೆ ಹೊರಗಡೆ ಹೋಗಿದ್ದರು. ಹೀಗೆ ಹೋದವರು ಸಂಜೆ ಸುಮಾರು 7 ಗಂಟೆಗೆ ಮನೆಗೆ ಬಂದರು. ಓದುತ್ತಾ ಇರುತ್ತೀನಿ ಅಂತ ಮನೆಯ ಮೇಲೆ ಹೋಗಿದ್ದರು ಎಂದರು.
ಈ ವೇಳೆ ನಾನು ಊಟಕ್ಕೆ ಏನು ಮಾಡ್ಲಿ ಅಂತ ಕೇಳೋದಕ್ಕೆ ಹೋದೆ. ಆಗ ಅವರು ಸ್ವಲ್ಪ ಬೇಜಾರಲ್ಲಿದ್ದರು. ಅದಾಗಲೇ ಅವರು ಏನು ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಅವರು ಪ್ರಜ್ಞೆ ಕಳೆದುಕೊಳ್ಳುತ್ತಾ ಇದ್ದರು. ಇದರಿಂದ ಗಾಬರಿಗೊಂಡ ನಾವು ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದೆವು ಎಂದು ತಿಳಿಸಿದರು.
ರಾಜಕೀಯ ಅಸಮತೋಲನದಿಂದ ಸ್ವಲ್ಪ ಬೇಜಾರಾಗಿದ್ದರು ಅಷ್ಟೆ. ಇನ್ನು ಕೌಟುಂಬಿಕವಾಗಿ ನಾವು ತುಂಬಾನೇ ಚೆನ್ನಾಗಿದ್ದೇವೆ. ಅಂಥದ್ದೇನೂ ಸಮಸ್ಯೆ ನಮ್ಮ ನಡುವೆ ಇಲ್ಲ. ಮುಕ್ತವಾಗಿ ಮಾತಾಡಿಕೊಂಡು ಎಲ್ಲಾ ರೀತಿಯಲ್ಲೂ ನಾವಿಬ್ಬರೂ ಚೆನ್ನಾಗಿದ್ದೇವೆ. ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡ ಕಾರಣ ಸ್ವಲ್ಪ ಅವರಿಗೆ ಪ್ರಜ್ಞೆ ಇಲ್ಲ. ಆದರೆ ಬೆಳಗ್ಗೆ ವೇಳೆ ಸರಿಹೋಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜಾಹ್ನವಿ ಹೇಳಿದ್ದಾರೆ.