ಬೆಂಗಳೂರು,ನ.27- ಪೊಲೀಸ್ ಇಲಾಖೆ ಆಧುನಿಕರಣಕ್ಕೆ ಮುಂದಿನ ಬಜೆಟ್ನಲ್ಲಿ 100 ಕೋಟಿಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಮಡಿವಾಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ಸಮುದಾಯ ಭವನ ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯ ನಿರ್ದೇಶಲಾಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಪೊಲೀಸ್ ವ್ಯವಸ್ಥೆ ಅತ್ಯುತ್ತಮವಾಗಿದೆ. ಅದನ್ನು ಇನ್ನಷ್ಟು ಶಸಕ್ತಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಪ್ರಯೋಗಾಲಯದ ಪ್ರಯೋಜನ ಸಮಾಜಕ್ಕೆ ದೊರೆಯಲಿ ಎಂದು ಆಶೀಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸೈಬರ್ ಅಪರಾಧಗಳಲ್ಲಿ ಹಣ ಕಳೆದುಕೊಂಡವರು ದೂರವಾಣಿ ಕರೆ ಮಾಡಿದರೆ ಸಾಕು ತಕ್ಷಣವೇ ಕೇಸು ದಾಖಲಿಸಿಕೊಂಡು ತೊಂದರೆಗೊಳಗಾದವರು ಮತ್ತು ಅಪರಾಧ ಮಾಡಿದವರ ಎರಡೂ ಖಾತೆಗಳನ್ನು ಜಪ್ತಿ ಮಾಡುವ ವಿನೂತನ ಪ್ರಯತ್ನವನ್ನು ರಾಜ್ಯ ಪೊಲೀಸರು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿದರು.