ಬಂಕುರ (ಪಶ್ಚಿಮ ಬಂಗಾಳ): ‘ಬಿಜೆಪಿಗಾಗಲಿ ಇನ್ನಾವುದೇ ಸಂಸ್ಥೆಗಳಿಗಾಗಲಿ ನಾನು ಹೆದರುವುದಿಲ್ಲ. ಅವರಿಗೆ (ಬಿಜೆಪಿ) ತಾಕತ್ತಿದ್ದರೆ ನನ್ನನ್ನು ಬಂಧಿಸಿ, ಕಂಬಿಗಳ ಹಿಂದೆ ಕೂರಿಸಲಿ. ಜೈಲಿನಿಂದಲೇ ಚುನಾವಣೆ ಎದುರಿಸುತ್ತೇನೆ. ಟಿಎಂಸಿ ಪಕ್ಷ ಗೆಲ್ಲುವುದು ಖಚಿತ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಹಾಕಿದರು.
‘ಕೋವಿಡ್ 19′ ನಂತರದ ಮೊದಲ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಮಾತಿನ ಉದ್ದಕ್ಕೂ ಬಿಜೆಪಿ ವಿರುದ್ಧ ಹಾಗೂ ಪಕ್ಷಾಂತರ ಮಾಡಲು ಸಿದ್ಧವಾಗಿರುವ ತಮ್ಮ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಹರಿ ಹಾಯ್ದರು.
ಬಿಜೆಪಿಯನ್ನು ‘ಸುಳ್ಳಿನ ಕಸ’ ಮತ್ತು ‘ರಾಷ್ಟ್ರಕ್ಕೆ ಅತಿ ದೊಡ್ಡ ಶಾಪ’ ಎಂದು ಜರಿದ ಮಮತಾ, ‘ನನ್ನನ್ನು ಬಂಧಿಸಿದರೂ ಚಿಂತೆಯಿಲ್ಲ, ಜೈಲಿನಿಂದಲೇ ಮುಂದಿನ ಚುನಾವಣೆಯನ್ನು ಎದುರಿಸಿ, ಟಿಎಂಸಿ ಪಕ್ಷವನ್ನು ಗೆಲ್ಲಿಸುತ್ತೇನೆ’ ಎಂದರು.
‘ಬಿಜೆಪಿ ಒಂದು ರಾಜಕೀಯ ಪಕ್ಷವಲ್ಲ, ಅದು ಸುಳ್ಳುಗಳ ಕಸ. ಚುನಾವಣೆ ಬಂದಾಗಲೆಲ್ಲ, ‘ಸ್ಟಿಂಗ್ ಆಪರೇಷನ್’ ಮತ್ತು ಹಗರಣಗಳ ವಿಷಯವನ್ನು ಮುಂದಿಟ್ಟುಕೊಂಡು ಟಿಎಂಸಿ ಪಕ್ಷದ ನಾಯಕರನ್ನು ಬೆದರಿಸಲು ಪ್ರಯತ್ನಿಸುತ್ತಾರೆ’ ಎಂದು ದೂರಿದರು.