ಲಕ್ನೋ: ಅಚ್ಚರಿಯ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಮೀರತ್ ನಿವಾಸಿಯಾಗಿರುವ ವರುಣ್ ಶರ್ಮಾ ಮನೆಯ ಚಾವಣಿಯ ಮೇಲೆ 2 ಬ್ಯಾಗ್ ತುಂಬಾ ಕಂತೆ ಕಂತೆ ಹಣ ಸಿಕ್ಕಿದ್ದು, ಕುಟುಂಬಸ್ಥರಿಗೆ ಅನಿರೀಕ್ಷಿತ ಅಚ್ಚರಿ ಮೂಡಿಸಿತ್ತು. ಕೂಡಲೇ ಎಚ್ಚೆತ್ತ ವರುಣ್ ಪೊಲೀಸರಿಗೆ ಹಣ ಸಿಕ್ಕ ಬಗ್ಗೆ ಮಾಹಿತಿ ನೀಡಿದ್ದ
ಮನೆಯ ಚಾವಣಿ ಮೇಲೆ ಸಿಕ್ಕ ಬ್ಯಾಗ್ನಲ್ಲಿ 40 ಲಕ್ಷ ರೂ. ಹಣ ಇರುವುದನ್ನು ಪೊಲೀಸರು ಖಚಿತಪಡಿಸಿದ್ದು, ಚಿನ್ನಾಭರಣದ ಮೌಲ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ದಿನೇಶ್ ಬಾಗೆಲ್ ತಿಳಿಸಿದ್ದಾರೆ.
ಪೊಲೀಸ್ ಮಾಹಿತಿ ಅನ್ವಯ ಹಣ ಸಿಕ್ಕ ಮನೆಯ ಸಮೀಪವಿದ್ದ ಉದ್ಯಮಿ ಪವನ್ ಸಿಂಘಾಲ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮೆಯ ಚಾವಣಿ ಮೇಲೆ ಹಣ ಪತ್ತೆಯಾದ ಕೂಡಲೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯ ಮನೆಯಲ್ಲಿ ಕೆಲಸ ಮಾಡುವ ಸೆಕ್ಯೂರಿಟಿ ಗಾರ್ಡ್ ಕಳ್ಳತನದ ಬಳಿಕ ನಾಪತ್ತೆಯಾಗಿದ್ದ. ಇದರಿಂದ ಪೊಲೀಸರು ಆತನ ಮೇಲೆ ಅನುಮಾನದೊಂದಿಗೆ ಪ್ರಕರಣದ ತನಿಖೆಯನ್ನು ನಡೆಸಿದ್ದರು.
ವಿಚಾರಣೆಯ ಸಂದರ್ಭದಲ್ಲಿ ಮನೆಯ ಕೆಲಸಗಾರನಾಗಿ 2 ವರ್ಷದ ಹಿಂದೆ ಕೆಲಸ ಬಿಟ್ಟಿದ್ದ ನೇಪಾಳಿ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಸೆಕ್ಯೂರಿಟಿಗಾರ್ಡ್ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಉದ್ಯಮಿಯ ಮನೆಯಲ್ಲಿ ಕೆಲಸಗಾರನಾಗಿದ್ದ ರಾಜು, ಕೆಲಸ ಬಿಟ್ಟ ಬಳಿಕವೂ ಮನೆಗೆ ಸಾಕಷ್ಟು ಭಾರೀ ಭೇಟಿ ನೀಡಿದ್ದ. ಈ ಸಂದರ್ಭದಲ್ಲಿ ಮನೆಯ ಸೆಕ್ಯೂರಿಟಿಗಾರ್ಡ್ ನನ್ನು ಪರಿಚಯ ಮಾಡಿಕೊಂಡು ಕಳ್ಳತನ ಮಾಡುವ ಪ್ಲಾನ್ ಮಾಡಿದ್ದ. ಇದರಂತೆ ಬುಧವಾರ ಮನೆಯಲ್ಲಿ ಕಳ್ಳನ ಮಾಡಿದ್ದ ಇಬ್ಬರು ಆರೋಪಿಗಳು ಆ ಬಳಿಕ ಕದ್ದ ಹಣ ಚಿನ್ನಾಭರಣಗಳನ್ನು ಹಂಚಿಕೊಂಡು ತೆರಳಿದ್ದರು ಎಂಬ ಮಾಹಿತಿ ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.