ನವದೆಹಲಿ: ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 2200 ಮಂದಿ ವಿದೇಶಿಯರಿಗೆ ಕೇಂದ್ರ ಸರ್ಕಾರ 10 ವರ್ಷಗಳ ನಿಷೇಧ ವಿಧಿಸಿದೆ.
ಭಾರತದಲ್ಲಿ ಕೊರೊನಾ ಪ್ರಕರಣ ಆರಂಭಿಕವಾಗಿ ವರದಿಯಾಗುತ್ತಿದ್ದ ಸಂದರ್ಭದಲ್ಲಿ ತಬ್ಲಿಘಿ ಜಮಾತ್ ಧಾರ್ಮಿಕ ಸಭೆ ಇಡೀ ದೇಶಕ್ಕೆ ಶಾಕ್ ನೀಡಿತ್ತು. ದೇಶದ ಹಲವರು ರಾಜ್ಯಗಳಿಂದ ಆಗಮಿಸಿದ್ದ ಜಮಾತ್ ಸದಸ್ಯರಿಂದ ಸೋಂಕು ಹೆಚ್ಚಾಗಿ ಹರಡಿತ್ತು. ಭಾರತ ಮಾತ್ರವಲ್ಲದೇ ವಿದೇಶದಿಂದ ಆಗಮಿಸಿದ್ದ ಹಲವು ಪ್ರವಾಸಿಗರು ಕೂಡ ಸಭೆಯಲ್ಲಿ ಭಾಗಿಯಾಗಿದ್ದ ಮಾಹಿತಿ ಆ ಬಳಿಕ ಬಹಿರಂಗವಾಗಿತ್ತು. ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಆಗಮಿಸಿದ್ದ ಹಲವರು ನಿಯಮಗಳನ್ನು ಮೀರಿ ಸಭೆಯಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಈ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
2200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಕೇಂದ್ರ ಗೃಹ ಇಲಾಖೆ ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದು, ಇವರ ಮೇಲೆ 10 ವರ್ಷ ಭಾರತಕ್ಕೆ ಆಗಮಿಸದಂತೆ ನಿಷೇಧ ವಿಧಿಸಿದೆ. ಜಮಾತ್ ಸಭೆಯಲ್ಲಿ ಭಾಗಿಯಾಗಿದ್ದ ಇವರು ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ಮರ್ಕಜ್ ಭವನದಲ್ಲಿ ಜರುಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಸರ್ಕಾರ ಗುರುತಿಸಿದೆ. ನಿಷೇಧ ಪಟ್ಟಿಯಲ್ಲಿ ಹೆಚ್ಚಿನ ಮಂದಿ ಇಂಡೋನೇಷ್ಯಾಗೆ ಸೇರಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ದೆಹಲಿ ಕಾರ್ಯಕ್ರಮದ ಬಳಿಕ ಹಲವರು ದೇಶದ ವಿವಿಧ ಭಾಗಗಳಲ್ಲಿ ಜರುಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪರಿಣಾಮ ದೇಶದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ದಿಢೀರ್ ಎಂದು ಹೆಚ್ಚಾಗಿತ್ತು. ಮೇ 13 ರಿಂದ 17ರ ವರೆಗೂ ದೆಲಿಯ ನಿಜಾಮುದ್ದೀನ್ನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು