ನಮ್ಮ ನಾಡಿನ ಹಸಿರನ್ನು, ವನ್ಯಜೀವಿಗಳನ್ನು ಹಗಲು-ಇರುಳು ಎನ್ನದೆ ಪ್ರಾಣದ ಹಂಗು ತೊರೆದು ಕಾಯುವ ಅರಣ್ಯ ರಕ್ಷಕರ ಸ್ಥಿತಿ ಇಂದು ಬೀದಿಗೆ ಬಂದಿದೆ. ಅಧಿಕಾರಿಗಳಿಗೆ ಲಕ್ಷ ಲಕ್ಷ ಸಂಬಳ, ಎಸಿ ರೂಮುಗಳ ಸುಖ.. ಆದರೆ ಕಾಡಿನ ಒಳಗೆ ಪ್ರಾಣಿಗಳ ಎದುರು ನಿಂತು ಕೆಲಸ ಮಾಡುವ ವಾಚರ್ಗಳಿಗೆ ಕನಿಷ್ಠ ವೇತನವೂ ಇಲ್ಲದಂತಾಗಿದೆ! ಇದು ನಮ್ಮ ವ್ಯವಸ್ಥೆಯ ದುರಂತವಲ್ಲವೇ?
ಬಂಡೀಪುರದಲ್ಲಿ ಪ್ರತಿಭಟನೆಯ ಕಿಚ್ಚು!
ನ್ಯಾಯಕ್ಕಾಗಿ ಆಗ್ರಹಿಸಿ ಇಂದಿನಿಂದ ಬಂಡೀಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಬಂದಿರುವ 1500ಕ್ಕೂ ಹೆಚ್ಚು ದಿನಗೂಲಿ ನೌಕರರು ತಮ್ಮ ಹಸಿವಿನ ಕೂಗನ್ನು ಸರ್ಕಾರಕ್ಕೆ ತಲುಪಿಸಲು ಧರಣಿ ಕುಳಿತಿದ್ದಾರೆ.
ಏನಿದು ಅರಣ್ಯ ನೌಕರರ ಅಳಲು?
20 ವರ್ಷದ ಸೇವೆಗೂ ಬೆಲೆ ಇಲ್ಲ: 20 ವರ್ಷ ಕೆಲಸ ಮಾಡಿದವರಿಗೂ ಅಷ್ಟೇ ಸಂಬಳ, ಇಂದು ಕೆಲಸಕ್ಕೆ ಸೇರಿದವರಿಗೂ ಅಷ್ಟೇ ವೇತನ! ಅನುಭವಕ್ಕೆ ಇಲ್ಲಿ ಕಿಮ್ಮತ್ತೇ ಇಲ್ಲದಂತಾಗಿದೆ.
ಸಮಾನ ಕೆಲಸ – ಸಮಾನ ವೇತನವಿಲ್ಲ: ದುಡಿಮೆ ಮಾತ್ರ ಎಲ್ಲರಿಗೂ ಒಂದೇ, ಆದರೆ ವೇತನ ನೀಡುವಾಗ ಮಾತ್ರ ಮಲತಾಯಿ ಧೋರಣೆ.
ಸೇವಾ ಭದ್ರತೆ ಶೂನ್ಯ: ಯಾವುದೇ ಕ್ಷೇಮಾಭಿವೃದ್ಧಿ ಸೌಲಭ್ಯಗಳಿಲ್ಲ, ನಾಳೆ ಕೆಲಸ ಇರುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ಬದುಕು ಸಾಗಿಸುತ್ತಿದ್ದಾರೆ.
ಬಾಕಿ ವೇತನದ ಸಂಕಷ್ಟ: ಕಳೆದ ಹಲವು ತಿಂಗಳಿಂದ ದುಡಿದ ಸಂಬಳವೂ ಸಿಗದೆ ಇವರ ಕುಟುಂಬಗಳು ಬೀದಿಗೆ ಬಿದ್ದಿವೆ.
ಸಚಿವರ ಮಾತಿಗೂ ಬೆಲೆಯಿಲ್ಲದ ಅಧಿಕಾರಿ ಶಾಹಿ!
ಸ್ವತಃ ಅರಣ್ಯ ಸಚಿವರೇ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದರೂ, ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಸಚಿವರ ಆದೇಶವನ್ನೇ ಗಾಳಿಗೆ ತೂರಿದ ಅಧಿಕಾರಿಗಳ ಹಠಮಾರಿತನಕ್ಕೆ ಈಗ 1500 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಕಾಡು ಉಳಿದರೆ ನಾಡು ಅಂದರು.. ಆದರೆ ಕಾಡು ಕಾಯುವವರ ಬದುಕು ಇಂದು ಪಾಡು ಹಾದಿ ಹಿಡಿದಿದೆ!
ಇವರ ನ್ಯಾಯಯುತ ಬೇಡಿಕೆಗಳು ಈಡೇರಲಿ. ಈ ಧ್ವನಿ ಸರ್ಕಾರಕ್ಕೆ ತಲುಪುವವರೆಗೂ ಶೇರ್ ಮಾಡಿ.
Laxmi News 24×7