ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಜಾರಿಗೊಂಡು ಹಲವು ತಿಂಗಳು ಕಳೆದರೂ ಇನ್ನೂ ಅನೇಕ ಗೃಹಿಣಿಯ ಖಾತೆಗೆ 2,000 ರೂ. ಜಮೆಯಾಗಿಲ್ಲ. ಕೊನೆಗೂ ಈ ಸಮಸ್ಯೆಗೆ ಅಂತ್ಯ ಹಾಡಲು ಸರ್ಕಾರ ಮುಂದಾಗಿದೆ.
ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಒಟ್ಟು 1.10 ಕೋಟಿ ಗೃಹಲಕ್ಷ್ಮಿಯರಿಗೆ ಹಣ ಜಮೆಯಾಗಿದ್ರೂ 5-6 ಲಕ್ಷದಷ್ಟು ಮಹಿಳೆಯರಿಗೆ ತಾಂತ್ರಿಕ ದೋಷದಿಂದ ಹಣ ಜಮೆಯಾಗಿರಲಿಲ್ಲ.
ಇದೀಗ ಗೃಹಲಕ್ಷ್ಮಿಯರಿದ್ದಡೆಗೆ ಅಧಿಕಾರಿಗಳು ತೆರಳಿ ಅದಾಲತ್ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಪಂಚಾಯತಿ, ನಗರಸಭೆ, ಪುರಸಭೆ ಸೇರಿದಂತೆ ರಾಜ್ಯಾದ್ಯಂತ ಅದಾಲತ್ ನಡೆಯಲಿದ್ದು ಅಕೌಂಟ್ಗೆ ದುಡ್ಡು ಬಾರದ ಮಹಿಳೆಯರು ಇಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದುಹೇಳಿದ್ದಾರೆ.
ಡಿಸೆಂಬರ್ 31 ರೊಳಗೆ ಎಲ್ಲಾ ಫಲಾನುಭವಿಗಳ ಅಕೌಂಟ್ಗೆ ಹಣ ಜಮೆ ಮಾಡಲು ಸಿಎಂ ಖಡಕ್ ಸೂಚನೆ ಕೊಟ್ಟಿದ್ದಾರೆ. ಇದರ ಮಧ್ಯೆ ಸುಮಾರು 50 ಸಾವಿರ ಟ್ಯಾಕ್ಸ್ ಪೇಯರ್ ಮಹಿಳೆಯರು ಕೂಡ ಗೃಹಲಕ್ಷ್ಮಿ ದುಡ್ಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಇವರ ಅರ್ಜಿ ತಿರಸ್ಕಾರ ಮಾಡಿರೋದಾಗಿ ಸಚಿವೆ ತಿಳಿಸಿದ್ದಾರೆ.