ಬೆಳಗಾವಿ: ಮುಂಗಾರು ಮಳೆ ಅಭಾವದಿಂದ ಭತ್ತದ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಪತ್ನಿಯ ಮಂಗಳಸೂತ್ರ ಬ್ಯಾಂಕಿನಲ್ಲಿ ಒತ್ತೆ ಇಟ್ಟು ಭತ್ತ ನಾಟಿ ಮಾಡಿದ್ದ ರೈತನಿಗೆ ಇತ್ತ ಭತ್ತವೂ ಇಲ್ಲ, ಅತ್ತ ಬಂಗಾರವೂ ಇಲ್ಲದ ಸ್ಥಿತಿ ಅನುಭವಿಸುತ್ತಿದ್ದಾರೆ. ಅನ್ನಕ್ಕಾಗಿ ಭತ್ತ ಬೆಳೆಯುವ ಅನ್ನದಾತನ ಕರುಣಾಜನಕ ಕಥೆ ಇಲ್ಲಿದೆ.
ಒಂದೆಡೆ ಹಾಳಾಗಿರುವ ಭತ್ತವನ್ನು ಕೀಳುತ್ತಿರುವ ರೈತ ಮಹಿಳೆ, ಮತ್ತೊಂದೆಡೆ ಸಹಾಯಕ್ಕಾಗಿ ಸರ್ಕಾರಕ್ಕೆ ಅಂಗಲಾಚುತ್ತಿರುವ ರೈತ ದಂಪತಿ. ಈ ಮನಕಲಕುವ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಶಾಹಪುರ ಭಾಗದ ಭತ್ತದ ಗದ್ದೆಯಲ್ಲಿ.
ಶಾಹಪುರ ರೈತ ರಾಜು ಕಣಬರಕರ್ ತಮ್ಮ 12 ಗುಂಟೆ ಭೂಮಿಯಲ್ಲಿ ಭತ್ತ ಬೆಳೆಯಲು ಪತ್ನಿ ವಿಜಯಾ ಅವರ 10 ಗ್ರಾಂ ಚಿನ್ನದ ಮಂಗಳಸೂತ್ರವನ್ನು ಖಾಸಗಿ ಬ್ಯಾಂಕಿನಲ್ಲಿ ಒತ್ತೆ ಇಟ್ಟು 30 ಸಾವಿರ ರೂ. ಸಾಲ ಪಡೆದಿದ್ದರು. ಇದರಲ್ಲಿ 25 ಸಾವಿರ ರೂ. ಖರ್ಚು ಮಾಡಿ ಭತ್ತ ಬೆಳೆದಿದ್ದರು. ಇನ್ನುಳಿದ ಐದು ಸಾವಿರ ರೂ. ಮನೆ ಕೆಲಸಕ್ಕೆ ಬಳಸಿಕೊಂಡಿದ್ದರು. ಒಳ್ಳೆಯ ಫಸಲು ಬಂದ ನಂತರ ಮಂಗಳಸೂತ್ರ ಬಿಡಿಸಿಕೊಳ್ಳುವ ಕನಸು ಕಂಡಿದ್ದರು. ಆದರೆ, ನೀರಿನ ಕೊರತೆಯಿಂದ ರೋಗಕ್ಕೆ ತುತ್ತಾದ ಭತ್ತ ಸಂಪೂರ್ಣ ಹಾನಿಯಾಗಿದೆ. ಒಂದು ಹಿಡಿಯಷ್ಟೂ ಭತ್ತ ಬರದಷ್ಟು ಸ್ಥಿತಿ ನಿರ್ಮಾಣವಾಗಿದೆ.