ಮಡಿಕೇರಿ: ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ವಿನಯ್ ಕುಲಕರ್ಣಿಯನ್ನು ಬಿಜೆಪಿ ಮುಖಂಡ ಯೋಗೇಶ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಬಂಧಿಸಿದೆ. ಪ್ರಕರಣದಲ್ಲಿ ಸಿಬಿಐ ತನ್ನ ಕೆಲಸ ತಾನು ಮಾಡುತ್ತಿದೆ. ಅದರಲ್ಲಿ ನಾವೇನೂ ಹೇಳುವುದಕ್ಕೆ ಬರುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಡಿಕೇರಿ ಸಮೀಪದ ತಾಜ್ ರೆಸಾರ್ಟ್ ಮತ್ತು ಸ್ಪಾದಲ್ಲಿ ಮೂರು ದಿನಗಳ ಕಾಲ ಖಾಸಗಿ ವಾಸ್ತವ್ಯ ಹೂಡಲು ಬಂದಿರುವ ಸಂದರ್ಭದಲ್ಲಿ ಸಚಿವರು ಮಾಧ್ಯಮಗಳ ಜೊತೆಗೆ ಮಾತನಾಡಿದರು. ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿರುವುದಕ್ಕೆ ಬಿಜೆಪಿ ವಿನಾಕಾರಣ ಸಿಬಿಐಯನ್ನು ಅಸ್ತ್ರವಾಗಿಸಿಕೊಳ್ಳುತ್ತಿದ್ದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು, ಪ್ರಕರಣದಲ್ಲಿ ಸಿಬಿಐ ತನ್ನ ಕೆಲಸ ತಾನು ಮಾಡುತ್ತಿದೆ. ಅದರಲ್ಲಿ ನಾವೇನು ಹೇಳುವುದಕ್ಕೆ ಬರುವುದಿಲ್ಲ ಎಂದರು.
ಮಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸದ ಕುರಿತು ಮಾತನಾಡಿದ ಸಚಿವರು, ಅದು ಅಪೇಕ್ಷಿತರಿಗೆ ಮಾತ್ರವೇ ನಡೆಯುತ್ತಿರುವ ಸಭೆ. ಅವರಿಗೆ ಮಾತ್ರವೇ ಆಹ್ವಾನವಿತ್ತು. ಕೊಡಗಿಗೆ ಈ ಹಿಂದೆಯೇ ಭೇಟಿ ನೀಡಬೇಕಾಯಿತ್ತು. ಆದರೆ ಹಲವು ಕಾರಣಗಳಿಗಾಗಿ ಸಾಧ್ಯವಾಗಿರಲಿಲ್ಲ. ನಾಳೆ ಪೊಲೀಸ್ ಇಲಾಖೆಯೊಂದಿಗೆ ಪರಿಶೀಲನಾ ಸಭೆ ನಡೆಯಲಿದೆ ಎಂದರು.

ಉಳಿದಂತೆ ಇಂದಿನಿಂದ ಮೂರು ದಿನಗಳ ತಾಜ್ ರೆಸಾರ್ಟ್ನಲ್ಲಿ ಗೃಹಸಚಿವ ಬಸವರಾಜ್ ಬೊಮ್ಮಾಯಿ ತಮ್ಮ ಕುಟುಂಬ ಸಮೇತರಾಗಿ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಸಂಜೆವರೆಗೂ ಜಿಲ್ಲೆಯಲ್ಲಿ ತಂಗಲಿರುವ ಗೃಹಸಚಿವರು ಶನಿವಾರ ರೆಸಾರ್ಟ್ ನಿಂದ ಚೆಕ್ ಔಟ್ ಆಗಲಿದ್ದಾರೆ.
Laxmi News 24×7