ಮೈಸೂರು: ಒಂದೇ ಕುಟುಂಬದ ನಾಲ್ವರು ಮನೆಯಲ್ಲಿಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ನಗರದ ಚಾಮುಂಡಿ ಪುರಂನಲ್ಲಿ ನಡೆದಿದೆ.
ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಲಭಾದೆಯಿಂದಲೇ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ನಗರದ ಚಾಮುಂಡಿಪುರಂನ ಮನೆಯಲ್ಲಿ ಮಹದೇವ ಸ್ವಾಮಿ (48), ಇವರ ಪತ್ನಿ ಅನಿತಾ(35), 17 ಹಾಗೂ 15 ವರ್ಷ ವಯಸ್ಸಿನ ಪುತ್ರಿಯರು ಶವವಾಗಿ ಪತ್ತೆಯಾದವರು. ಮಹದೇವ ಸ್ವಾಮಿ ಶವ ಮನೆಯ ಹಾಲ್ನಲ್ಲಿ ಪತ್ತೆಯಾಗಿದ್ದರೆ, ಹೆಂಡತಿ ಅನಿತಾ ಮೃತದೇಹ ಕುರ್ಚಿಯ ಮೇಲೆ, ದೊಡ್ಡ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತು ಚಿಕ್ಕ ಮಗಳ ಶವ ಕೊಠಡಿಯಲ್ಲಿ ಪತ್ತೆಯಾಗಿದೆ.
ಭಾನುವಾರ ಮಧ್ಯಾಹ್ನ ಮನೆಯಿಂದ ಕೊಳೆತ ವಾಸನೆ ಬರುತ್ತಿದ್ದಂತೆಯೇ ನೆರೆಯ ವಾಸಿಗಳು ಅನುಮಾನಗೊಂಡು, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನಾಲ್ವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೂಲತಃ ಜಯಪುರ ಹೋಬಳಿ ಬರಡನಪುರ ಗ್ರಾಮದವರಾದ ಮಹದೇವಸ್ವಾಮಿ ಬಂಡಿಪಾಳ್ಯದಲ್ಲಿ ತರಕಾರಿ ದಲ್ಲಾಳಿಯಾಗಿದ್ದರು. ವಿದ್ಯಾರಣ್ಯಪುರಂನಲ್ಲಿ ವಾಸವಾಗಿದ್ದ ಅವರು ಎರಡು ತಿಂಗಳ ಹಿಂದೆಯಷ್ಟೇ ಚಾಮುಂಡಿಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿಗಳಾದ ಮುತ್ತುರಾಜು, ಬಿ.ಟಿ. ಜಾಹ್ನವಿ, ಎಸಿಪಿ ಗಂಗಾಧರ ಸ್ವಾಮಿ, ಕೆ.ಆರ್. ಠಾಣೆ ಇನ್ಸ್ಪೆಕ್ಟರ್ ನಾಗೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಎಫ್ಎಸ್ಎಲ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ಹುಣಸೂರಿನಲ್ಲಿರುವ ಅನಿತಾ ಅವರ ಪೋಷಕರು ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಈ ಸಂಬಂಧ ಕೆ.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಒಂದೇ ಕುಟುಂಬದ ನಾಲ್ವರು ಮೃತಪಟ್ಟು 2 ರಿಂದ 3 ದಿನಗಳು ಕಳೆದಿದೆ. ಶವಗಳು ಕೊಳೆತಿದ್ದು, ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದೆ. ತನಿಖೆಯ ಬಳಿಕ ಘಟನೆಗೆ ನಿಖರ ಕಾರಣಗಳು ತಿಳಿಯಲಿದೆ ಎಂದು ತಿಳಿಸಿದ್ದಾರೆ.