Home / ರಾಜ್ಯ / ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರಿಗೆ ಪೊಲೀಸರ ಗುಂಡೇಟು

ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರಿಗೆ ಪೊಲೀಸರ ಗುಂಡೇಟು

Spread the love

ಆನೇಕಲ್,ನ.2- ರೌಡಿಗಳಾಗಬೇಕು ಎಂಬ ಉದ್ದೇಶದಿಂದ ಯುವಕನೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ಕು ಮಂದಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿಯುವಲ್ಲಿ ಆನೇಕಲ್ ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಅನಂತರಾಮ, ಗೋಪಿ, ಗಂಗ, ಬಸವ, ಗುಂಡೇಟು ತಗುಲಿ ಗಾಯಗೊಂಡಿರುವ ಆರೋಪಿಗಳು. ಕಾರ್ಯಾಚರಣೆ ವೇಳೆ ಆರೋಪಿಗಳಾದ ಪವನ್ ಮತ್ತು ಗುಂಡ ಮತ್ತಿತರರು ಪರಾರಿಯಾಗಿದ್ದಾರೆ.

ಕಳೆದ ಅಕ್ಟೋಬರ್ 30 ರಂದು ಮಾಯಸಂದ್ರ ಕೋಡಿಯಲ್ಲಿ ಬೆಸ್ತಮಾನಹಳ್ಳಿ ನಿವಾಸಿ ವಿನೂತ್ ಎಂಬಾತನನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ವಿನೂತ್ ಕೊಲೆ ಪ್ರಕರಣದ ಆರೋಪಿಗಳು ಆನೇಕಲ್ ಸೂರ್ಯ ಸಿಟಿ ಬಳಿಯ ಮುತ್ಯಾನಲ್ಲೂರು ಗ್ರಾಮದ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅತ್ತಿಬೆಲೆ ಪೋಲಿಸ್ ಇನ್ಸ್‍ಪೆಕ್ಟರ್ ಸತೀಶ್ ಮತ್ತು ಸರ್ಜಾಪುರ ಸಬ್ ಇನ್ಸ್‍ಪೆಕ್ಟರ್ ಹರೀಶ್‍ರೆಡ್ಡಿ ನೇತೃತ್ವದ ಎರಡು ಪೊಲೀಸ್ ತಂಡಗಳು ತೆರಳಿವೆ.

ಪೊಲೀಸರನ್ನು ಕಂಡ ಆರೋಪಿಗಳು ಕಾನ್ಸ್‍ಟೇಬಲ್‍ಗಳಾದ ಇರ್ಫಾನ್ ಮತ್ತು ನಾಗರಾಜ್ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣ ಇನ್ಸ್‍ಪೆಕ್ಟರ್‍ಗಳಾದ ಸತೀಶ್ ಮತ್ತು ಹರೀಶ್‍ರೆಡ್ಡಿ ಅವರು ಸಿಬ್ಬಂದಿಗಳ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದರೂ ಪೊಲೀಸರ ಮಾತಿಗೆ ಕಿವಿಗೊಡದೆ ಹಲ್ಲೆಗೆ ಮುಂದಾದಾಗ ಇನ್ಸ್‍ಪೆಕ್ಟರ್ ಹಾರಿಸಿದ ಗುಂಡುಗಳು ಬಸವ ಮತ್ತು ಅನಂತ್ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಪೊಲೀಸರು ಸುತ್ತುವರಿದು ಆರೋಪಿಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಅದೇ ರೀತಿ ಆನೇಕಲ್ ತಾಲ್ಲೂಕಿನ ಅವಡದೇವನಹಳ್ಳಿ ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದ ಗಂಗ ಮತ್ತು ಗೋಪಿಯನ್ನು ಬಂಧಿಸಲು ತೆರಳಿದ್ದ ಆನೇಕಲ್ ಠಾಣೆ ಕಾನ್ಸ್‍ಸ್ಟೆಬಲ್‍ಗಳಾದ ಮಹೇಶ್ ಮತ್ತು ಸುರೇಶ್ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾದಾಗ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಹಾದೇವ್ ಮತ್ತು ಆನೇಕಲ್ ಇನ್ಸ್‍ಪೆಕ್ಟರ್ ಕೃಷ್ಣರವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಕಿವಿಗೊಡದಿದ್ದಾಗ ಪೊಲೀಸರು ಆತ್ಮರಕ್ಷಣೆಗೆ ಹಾರಿಸಿದ ಗುಂಡುಗಳು ಆರೋಪಿಗಳ ಇಬ್ಬರ ಕಾಲಿಗೂ ತಗುಲಿ ಕುಸಿದು ಬಿದ್ದರು. ಇವರಿಬ್ಬರನ್ನು ಸುತ್ತುವರಿದು ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಕಾನ್ಸ್‍ಟೆಬಲ್‍ಗಳಾದ ಇರ್ಫಾನ್ ಮತ್ತು ನಾಗರಾಜು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೌಡಿಸಂ ಫೀಲ್ಡ್‍ನಲ್ಲಿ ಬೆಳೆಯಬೇಕೆಂಬ ಆಸೆಯಿಂದ ವಿನೂತ್‍ನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ವಿನೂತ್‍ನನ್ನು ಕೊಲೆ ಮಾಡಿದ ನಂತರ ಆರೋಪಿಗಳು ತಮಿಳುನಾಡಿನ ಡೆಂಕಣಿ ಕೋಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸುತ್ತಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಆನೇಕಲ್ ಉಪವಿಭಾಗದ ಪೊಲೀಸರು ಬಲೆಬೀಸಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ