ಬೆಳಗಾವಿ:ಬರುವ ಸ್ಥಳೀಯ ಮಟ್ಟದ ಚುನಾವಣೆ ಬಿಜೆಪಿಗೆ ಮಹತ್ವವಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ, ಕೇಂದ್ರ ಸರಕಾರದ ಮಹತ್ತರ ಯೋಜನೆಯನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಸೋಮವಾರ ನಗರದ ಧರ್ಮನಾಥ ಭವನದಲ್ಲಿ ಬೆಳಗಾವಿ ಗ್ರಾಮಾಂತರ, ಮಹಾನಗರ ಮತ್ತು ಚಿಕ್ಕೋಡಿ ಜಿಲ್ಲೆಯ ಪ್ರಮುಖರ ಪ್ರಶಿಕ್ಷಣ ವರ್ಗದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2014ರ ಬಳಿಕ ನಮ್ಮ ಸರಕಾರದ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಾಕಷ್ಟು ಯೋಜನೆಯನ್ನು ನೀಡಿದ್ದಾರೆ. ಆ ಯೋಜನೆಯನ್ನು ಪಟ್ಟಿ ಮಾಡಿ ರೈತರಿಗೆ, ಮಹಿಳೆಯರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಯಾವೇಲ್ಲ ಯೋಜನೆ ಬಂದಿವೆ ಎನ್ನುವುದನ್ನು ಮೊದಲು ಕಾರ್ಯಕರ್ತರು ತಿಳಿದುಕೊಂಡು ಜನರಿಗೆ ತಿಳಿಸಬೇಕಿದೆ ಎಂದರು.
ಭೂಸೂಧಾರಣೆ ಹಾಗೂ ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ಕಾಂಗ್ರೆಸ್ ರೈತರ ಹಾಗೂ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಕಾಯ್ದೆಯ ಬಗ್ಗೆ ಈಗಾಗಲೇ ರಾಜ್ಯ ಸರಕಾರ ಸದನದಲ್ಲಿ ಅಂಗೀಕಾರ ಮಾಡಿದೆ. ಜನರಿಗೆ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿರುವ ಕಾಂಗ್ರೆಸ್ ನಡುವಳಿಕೆಯ ಬಗ್ಗೆ ಲಕ್ಷಾಂತರ ಕರ ಪತ್ರ ಹಂಚಿ ಜನರಿಗೆ ಮನವರಿಕೆ ಮಾಡಿಕೊಡುತ್ತ ಸಾಗಿದೆ ಎಂದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೇಂದ್ರ ಸರಕಾರದ ಯೋಜನೆ ತಲುಪಬೇಕು. ಆತ್ಮ ನಿರ್ಭರ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ 20 ಲಕ್ಷ ಕೋಟಿ ರು. ವಿಶೇಷ ಅನುದಾನ ನೀಡಿದೆ. ಅದನ್ನು ಸದುಪಯೋಗ ಪಡೆದುಕೊಳ್ಳಲು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಹೇಳಿದರು