ಬೆಂಗಳೂರು: ಉಪ ಚುನಾವಣೆ ಕ್ಷೇತ್ರ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇಂದು ನಗರದ ಪೀಣ್ಯದಲ್ಲಿ ತುರ್ತುಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಹಣ ಹಂಚಿಕೆಯ ಆರೋಪವನ್ನ ಮಾಡಿದರು. ಮನೆಯಲ್ಲಿ ಎಷ್ಟು ಮತಗಳಿವೆ ಎಂದು ಲಿಸ್ಟ್ ಮಾಡಿಕೊಂಡು ಹಣ ಹಂಚಿಕೆ ಮಾಡಲಾಗುತ್ತಿದೆ. ಕನಕಪುರದಿಂದ ಬಂದಿರುವ ಅರ್ಜುನ್ ಮತ್ತು ಅರುಣ್ ಎಂಬವರು ಹಣ ಹಂಚುವ ವೇಳೆ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರಸ್ ನವರು ದೊಡ್ಡ ಮಟ್ಟದಲ್ಲಿ ಹಣ ಹಂಚುವ ಕಾರ್ಯ ಶುರು ಮಾಡಿದ್ದಾರೆ. ಅರ್ಜುನ್ ಎಂಬಾತ ಪ್ರತಿ ಮತಕ್ಕೆ ಸಾವಿರ ರೂ ನೀಡಿ ಕಾಂಗ್ರೆಸ್ ಗೆ ಮತ ಹಾಕೆಂದು ಹೇಳುತ್ತಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದರು.
ಇವತ್ತಿನ ಚುನಾವಣೆ ಅಕ್ರಮಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾಹಿತಿ ಬರುತ್ತಿದೆ. 2000 ದಂದು ಕನಕಪುರದಲ್ಲಿ ನಡೆದ ಉಪಚುನಾವಣೆ ನೆನಪಾಗುತ್ತಿದೆ. ಅಂದು ಇದೇ ಡಿ.ಕೆ.ಶಿವಕುಮಾರ್ ಮಂತ್ರಿಗಳಾಗಿ ಚುನಾವಣೆ ಅಭ್ಯರ್ಥಿಯಾಗಿದ್ದರು. ಚುನಾವಣೆ ಕೊನೆ ದಿನ ಕಳ್ಳ ಮತದಾನಕ್ಕಾಗಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಮತ್ತು ಮೈಸೂರು ಭಾಗದಿಂದ ಜನರನ್ನು ಕರೆದುಕೊಂಡು ಬಂದಿದ್ದರು. ಆರ್ಎಂಆರ್ ಚೌಟರಿ ಸೇರಿ ವಿವಿಧೆಡೆ ಜನರನ್ನು ಉಳಿಸಿಕೊಂಡಿದ್ದರು. ಅಂದು ಕಳ್ಳ ಮತದಾನ ತಡೆಯುವ ಕೆಲಸ ಮಾಡಿದ ದಿನಗಳು ಕಣ್ಮುಂದೆ ಬರುತ್ತಿವೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಹೆಚ್ಡಿಕೆ ಹರಿಹಾಯ್ದರು.
ಹಣ ಹಂಚುವ ಕೆಲಸದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ವೇಗದಲ್ಲಿ ಹೊರಟಿದೆ. ಜನರ ಗಮನಕ್ಕೆ ತರುವ ಉದ್ದೇಶದಿಂದ ಈ ಸುದ್ದಿಗೋಷ್ಠಿ ಕರೆದಿದ್ದೇನೆ. ಈ ರೀತಿ ರಾಜಕಾರಣ ಮಾಡೋದನ್ನ ಬಿಜೆಪಿ ಅಭ್ಯರ್ಥಿಯಿಂದ ಕಾಂಗ್ರೆಸ್ ಕಲೀತಾ ಅಥವಾ ಕಾಂಗ್ರೆಸ್ ನಿಂದ ಬಿಜೆಪಿ ಕ್ಯಾಂಡಿಡೇಟ್ ಹಣ ವಿತರಿಸೋದನ್ನ ಕಲಿತಾ ಎಂಬುದನ್ನ ಕೈ ನಾಯಕರು ಸ್ಪಷ್ಟಪಡಿಸಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದರು.