ಬೆಂಗಳೂರು: ಉಪಚುನಾವಣೆ ಬೆನ್ನಲ್ಲೇ ಸಿಎಂ ಕುರ್ಚಿ ಕಾಲೆಳೆಯುವ ವಾಕ್ಸಮರ ಆರಂಭವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನು 15-20ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿದ ಸಿದ್ದರಾಮಯ್ಯ, ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕೂಡ ಅಂತ್ಯವಾಗಲಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾದರೆ ಬಿಜೆಪಿ ಸರ್ಕಾರ ಪತನವಾಗಿ, ಮತ್ತೆ ಚುನಾವಣೆ ಎದುರಾಗುವುದು ಖಚಿತ ಎಂದು ಹೇಳಿದರು.
ಇದೇ ವೇಳೆ ತಾವು ಮತ್ತೆ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನಾನು ಸನ್ಯಾಸಿಯಲ್ಲ, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಮುಂದಿನ ಚುನಾವಣೆ ಬಗ್ಗೆ, ಮುಖ್ಯಮಂತ್ರಿ ಆಯ್ಕೆ ಬಗ್ಗೆ ನಾನು ಅಧಿಕೃತವಾಗಿ ಹೇಳಿಕೆಗಳನ್ನು ನೀಡಲು ಆಗುವುದಿಲ್ಲ. ಆದರೆ ರಾಜ್ಯದಲ್ಲಿ ಸಿಎಂ ಬದಲಾದರೆ ಬಿಜೆಪಿ ಸರ್ಕಾರ ಉರುಳುವುದು ನಿಶ್ಚಿತ ಎಂದು ತಿಳಿಸಿದರು.