ಬೆಂಗಳೂರು: ಅನುದಾನಿತ ಶಾಲೆಗಳಲ್ಲಿ ಫಲಿತಾಂಶ ಗಣನೀಯವಾಗಿ ಇಳಿಯುತ್ತಿರುವುದು ದೊಡ್ಡ ಸಮಸ್ಯೆ.
ಇದರ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ಡಾ. ವೈ.ಎ.ನಾರಾಯಣ ಸ್ವಾಮಿ ನಿಯಮ 72ರ ಅಡಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಯನ್ನು ಕಾಲಕಾಲಕ್ಕೆ ಭರ್ತಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಫಲಿತಾಂಶ ಹೆಚ್ಚಳಕ್ಕೆ 2020ರ ನಂತರದ ಖಾಲಿ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುತ್ತೇನೆ. ಕೆಲವರು ಹೋರಾಟಕ್ಕೆ ಇಳಿದಿದ್ದಾರೆ, ಅವರನ್ನೂ ಮಾತನಾಡಿಸುತ್ತೇನೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಆಹಾರ ದೊರಕಿಸಲು ಕ್ರಮ ಕೈಗೊಳ್ಳುತ್ತೇನೆ. ಸಚಿವನಾಗಿ ಹೆಚ್ವು ಅನುಭವ ಇಲ್ಲದಿದ್ದರೂ, ಶಾಲೆ ನಡೆಸಿದ ಅನುಭವ ಇದೆ. ಇದರಿಂದ ಸಕಾಲಕ್ಕೆ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.
ಸದಸ್ಯರಾದ ಶಶಿಲ್ ನಮೋಶಿ, ಎಸ್.ವಿ.ಸಂಕನೂರು ಹಾಗೂ ಮತ್ತಿತರ ಸದಸ್ಯರು, ಶಿಕ್ಷಕರ ಸಮಸ್ಯೆ, ನಿವೃತ್ತಿ ನಂತರ ಶಿಕ್ಷಕರ ಸ್ಥಾನಕ್ಕೆ ಹೊಸ ಶಿಕ್ಷಕರ ನೇಮಕ ವಿಳಂಬಕ್ಕೆ ಪರಿಹಾರ ಕಂಡುಕೊಳ್ಳಬೇಕೆಂಬ ಮಾಹಿತಿ ನೀಡಿದರು. ಈ ಚರ್ಚೆಯ ಸಂದರ್ಭ ಸದಸ್ಯರ ಪ್ರಶ್ನೆಗೆ ವಿಸ್ತೃತ ಉತ್ತರ ನೀಡಿದ ಅವರು, ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ 2015ರ ಡಿಸೆಂಬರ್ರವರೆಗೆ ಖಾಲಿ ಆಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಅದರಂತೆ 2015ರ ಡಿಸೆಂಬರ್ 31ರ ಪೂರ್ವದಲ್ಲಿ ಖಾಲಿಯಾದ ಎಲ್ಲ ಅರ್ಹ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೋರಿ ಆಡಳಿತ ಮಂಡಳಿಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳಿಗೆ ನಿಯಮಾನುಸಾರ ಪರಿಶೀಲಿಸಿ ಅನುದಾನಸಹಿತವಾಗಿ ಅನುಮೋದಿಸಲಾಗುತ್ತಿದೆ. ಜಿಲ್ಲೆಗಳಲ್ಲಿ ಕಾರ್ಯಭಾರ ಕಡಿಮೆ ಇರುವ ಅನುದಾನಿತ ಶಾಲೆಗಳ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಮರು ನಿಯೋಜನೆಗೊಳಿಸಲು ಜಿಲ್ಲಾ ಉಪನಿರ್ದೇಶಕರ ಹಂತದಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು.