ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸ್ತುತ ಸಾಲಿನ ಬಜೆಟ್, ರಾಜ್ಯದ ಸಮಗ್ರ ಅಭಿವೃದ್ಧಿ ಕಲ್ಪನೆ ಇಲ್ಲದೇ, ತೆರಿಗೆ ಹೊರೆ ಇರುವ ಬಜೆಟ್ ಆಗಿದೆ. 85000 ಕೋಟಿ ಸಾಲ ಮಾಡುತ್ತೇನೆ ಎಂದು ಹೇಳಿದ್ದು, ಈ ಸಾಲದ ಹೊರೆ ರಾಜ್ಯದ ಜನತೆಯ ಮೇಲೆ ಬೀಳುತ್ತದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.
ಬಜೆಟ್ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ತಮ್ಮ ಮೂರು ಗಂಟೆಗಳ ಸುದೀರ್ಘ ಭಾಷಣದಲ್ಲಿ ಕೆಲವು ಸಮಯವನ್ನು ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳನ್ನು ಅನಗತ್ಯವಾಗಿ ಟೀಕಿಸಲು ಬಳಸಿಕೊಂಡರು.
ಹಿಂದಿನ ನನ್ನ ನೇತೃತ್ವದ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಾಧಿಸಿದ ಪ್ರಗತಿ ಮತ್ತು ಆರ್ಥಿಕ ಸದೃಢತೆ ಮರೆಮಾಚಿ ಇಲ್ಲದ ವೈಫಲ್ಯ ಎತ್ತಿ ಆಡುವ ಮೂಲಕ ಬಜೆಟ್ ಮಂಡನೆಯ ಪವಿತ್ರ ಸಂದರ್ಭವನ್ನು ಕೀಳು ಮಟ್ಟದ ರಾಜಕೀಯಕ್ಕೆ ಬಳಕೆ ಮಾಡಿಕೊಂಡಿದ್ದು, ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಭಾಷಣದಂತಿದ್ದ ಬಜೆಟ್ ಮಂಡನೆ: ಪ್ರಥಮ ಸಚಿವ ಸಂಪುಟದಲ್ಲಿಯೇ ಎಲ್ಲ ಗ್ಯಾರೆಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಸರ್ಕಾರ, ಇಂದು ಈ ಬಜೆಟ್ ನಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲು ಇಡೀ ಆರ್ಥಿಕ ವರ್ಷ ಬೇಕಾಗಬಹುದು ಎಂದು ಅಧಿಕೃತವಾಗಿ ಹೇಳಿದಂತಾಗಿದೆ.