ಬೆಂಗಳೂರು, ಜುಲೈ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಾರಿ ರಾಜ್ಯದ ಬಜೆಟ್ ಮಂಡಿಸುತ್ತಿದ್ದಾರೆ. 2023-2024ರಲ್ಲಿ 3,24,478 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಸಂಪನ್ಮೂಲವನ್ನು ಕ್ರೂಢೀಕರಿಸಲು ಅಬಕಾರಿ ಸುಂಕವನ್ನು ಶೇಕಡಾ 20ರಷ್ಟು ಹೆಚ್ಚಿಸಿದ್ದು, ಮದ್ಯಪ್ರಿಯರಿಗೆ ಶಾಕ್ ಕೊಟ್ಟಿದ್ದಾರೆ.
ಭಾರತೀಯ ನಿರ್ಮಿತ ವಿದೇಶಿ ಮದ್ಯದ (ಐಎಂಎಫ್ಎಲ್) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಶೇ 20 ರಷ್ಟು ಹೆಚ್ಚಿಸಲಾಗಿದೆ. ಬಿಯರ್ಗೆ, ಅಬಕಾರಿ ಸುಂಕವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ, ಅದನ್ನು ಶೇಕಡಾ 175 ರಿಂದ ಶೇಕಡಾ 185 ಕ್ಕೆ ಹೆಚ್ಚಾಗಲಿದೆ. ಮುಖ್ಯಮಂತ್ರಿಗಳು ಅಬಕಾರಿಯ ಎಲ್ಲಾ 18 ಸ್ಲ್ಯಾಬ್ಗಳಲ್ಲಿ ಶೇ.20 ರಷ್ಟು ತೆರಿಗೆ ವಿಧಿಸಿದ್ದಾರೆ.
3,27,747 ಕೋಟಿ ರೂ.ಗಳ ರಾಜ್ಯ ಬಜೆಟ್ ಘೋಷಿಸಿದ್ದು, ಇದರಲ್ಲಿ 2,50,933 ಕೋಟಿ ರೂ. ರಾಜಸ್ವ ವೆಚ್ಚ, 54,374 ಕೋಟಿ ಬಂಡವಾಳ ವೆಚ್ಚ ಹಾಗೂ 22,441 ಕೋಟಿ ಸಾಲ ಮರುಪಾವತಿಗೆ ಮೀಸಲಿಡಲಾಗಿದೆ. ಶಿಕ್ಷಣಕ್ಕಾಗಿ ರೂ 37,587 ಕೋಟಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ರೂ 24,166 ಕೋಟಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹಂಚಿಕೆಗಳನ್ನು ಸಿದ್ದರಾಮಯ್ಯ ಘೋಷಿಸಿದರು.
ಬಿಯರ್ ದರ ಹೆಚ್ಚಳ, ಮದ್ಯವೂ ದುಬಾರಿ
ಅಬಕಾರಿ ಸುಂಕ ಹೆಚ್ಚಳದಿಂದ ರಾಜ್ಯದಲ್ಲಿ ಮದ್ಯ ಮತ್ತು ಬಿಯರ್ ದರಗಳು ಹೆಚ್ಚಾಗಲಿವೆ. ಬಿಯರ್ ದರ 10-20 ರೂಪಾಯಿವರೆಗೆ ಹೆಚ್ಚಾಗಲಿದ್ದು ಮದ್ಯ ಪ್ರಿಯರಿಗೆ ಹೆಚ್ಚಿನ ಹೊರೆ ಬೀಳಲಿದೆ. ಈ ಮೊದಲು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮದ್ಯ ಮಾರಾಟಗಾರರಿಂದ 35 ಸಾವಿರ ಕೋಟಿ ರೂ. ಸಂಗ್ರಹ ಮಾಡುವ ಗುರಿ ಹೊಂದಿತ್ತು, ಆದರೆ 29 ಸಾವಿರ ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿತ್ತು.
ಅಬಕಾರಿ ಸುಂಕದ ದರಗಳ ಹೆಚ್ಚಳದ ನಂತರವೂ ನಮ್ಮ ರಾಜ್ಯದಲ್ಲಿ ಮದ್ಯದ ದರವು ನೆರೆ ರಾಜ್ಯಗಳಿಗಿಂತ ಕಡಿಮೆ ಇರುತ್ತದೆ. ಇದರೊಂದಿಗೆ, ಹೆಚ್ಚು ಪರಿಣಾಮಕಾರಿಯಾದ ಜಾರಿ ಮತ್ತು ನಿಯಂತ್ರಣಾ ಕ್ರಮಗಳ ಮೂಲಕ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 36,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. . ಈ ಮೂಲಕ ಐದು ಗ್ಯಾರಂಟಿಗಳ ಜಾರಿಗಾಗಿ ಬೇಕಾಗುವ ಸಂಪನ್ಮೂಲವನ್ನು ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
3 ಇಲಾಖೆಗಳಿಂದ 1,62,000 ಕೋಟಿ ತೆರಿಗೆ ಸಂಗ್ರಹ ಗುರಿ!
ರಾಜ್ಯದ ಪ್ರಮುಖ ಮೂರು ಇಲಾಖೆಗಳಿಂದ 1,62,000 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಇದರಲ್ಲಿ ಅಬಕಾರಿ ಇಲಾಖೆಯಿಂದ 36,000 ಕೋಟಿ, ನೋಂದಣಿ & ಮುದ್ರಾಂಕ ಇಲಾಖೆಯಿಂದ 25,000 ಕೋಟಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಲಕ್ಷ ಕೋಟಿ ಸೇರಿ ಒಟ್ಟು 1,62,000 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನ ಹೊಂದಿದೆ.