ಬೆಂಗಳೂರು: ಆರ್.ಆರ್ ನಗರ ಕ್ಚೇತ್ರದ ಉಪಚುನಾವಣೆ ಪ್ರಚಾರ ಕಣ ಕ್ಲೈಮಾಕ್ಸ್ ಗೆ ಬರ್ತಿದೆ. ಕ್ಲೈಮಾಕ್ಸ್ ನಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ. ಈ ಮೂಲಕ ಆರ್ ಆರ್ ನಗರದಲ್ಲಿ ಸಾರಥಿ ಧೂಳೆಬ್ಬಿಸ್ತಾರೆ ಎನ್ನಲಾಗ್ತಿದೆ.
ಸ್ಯಾಂಡಲ್ವುಡ್ನ ಚಾಲೆಜಿಂಗ್ ಸ್ಟಾರ್ ದರ್ಶನ್, ಕನ್ನಡದ ಸೂಪರ್ ಸ್ಟಾರ್ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರೋ ಯಜಮಾನ ಎರಡು ವರ್ಷಗಳ ಹಿಂದೆ ಇದೇ ದಾಸ ಮಂಡ್ಯ ಎಲೆಕ್ಷನ್ನಲ್ಲಿ ಮಿಂಚಿದ್ದನ್ನು ಯಾರೂ ಮರೆಯಂಗೇ ಇಲ್ಲ. ತಮ್ಮ ಮದರ್ ಇಂಡಿಯಾ ಸುಮಲತಾ ಅಂಬರೀಶ್ ಪರ ದರ್ಶನ್ ಮಂಡ್ಯದಲ್ಲಿ ಕ್ಯಾಂಪೇನ್ ಮಾಡಿದ್ದರು. ಅಂದಿನ ಮೈತ್ರಿ ಸರ್ಕಾರದ ಘಟಾನುಘಟಿ ನಾಯಕರಿಗೆ ಸಿನಿಮಾ ಸ್ಟೈಲ್ನಲ್ಲೇ ಟಾಂಗ್ ಕೊಟ್ಟಿದ್ರು.
ಅಂದು ಚಂದನವನದ ಯಜಮಾನನಿಗೆ ಜೊತೆಯಾಗಿದ್ದು ರಾಕಿಂಗ್ ಸ್ಟಾರ್ ಯಶ್. ಜೋಡೆತ್ತು ಅಂತಲೇ ಕರೆಸಿಕೊಂಡಿದ್ದ ಜೋಡಿ, ಸಕ್ಕರೆನಾಡಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮತಬೇಟೆ ನಡೆಸಿದ್ದರು. ದರ್ಶನ್ ಖದರ್ಗೆ ಮೆಚ್ಚಿದ ಮಂಡ್ಯದ ಜನ ಸಿನಿಮಾವನ್ನು ಅಂಡ್ರೆಡ್ ಡೇಸ್ ಓಡಿಸಿದಂತೆ ಸುಮಲತಾರಿಗೆ ವೋಟು ಹಾಕಿದ್ದರು. ಸುಮಲತಾರನ್ನು ಎಂಪಿ ಮಾಡೋವರೆಗೂ ದರ್ಶನ್ ವಿರಮಿಸಲೇ ಇಲ್ಲ.
ಮಿನಿ ಕುರುಕ್ಷೇತ್ರದಲ್ಲಿ ಸುಯೋಧನ:
ಈಗ ರಾಜ್ಯದಲ್ಲಿ ಬೈ ಎಲೆಕ್ಷನ್ ಬಂದಿದೆ. ಅದ್ರಲ್ಲೂ ದರ್ಶನ್ ಹಾಕಿಕೊಂಡು ಬಹುಕೋಟಿ ಸಿನಿಮಾ ಕುರುಕ್ಷೇತ್ರ ನಿರ್ಮಿಸಿದ್ದ ಮುನಿರತ್ನ ಚುನಾವಣೆಗೆ ನಿಂತಿದ್ದಾರೆ. ದರ್ಶನ್ ಮನೆ ಸಹ ಆರ್.ಆರ್ ನಗರದಲ್ಲೇ ಇದೆ. ಮುನಿರತ್ನ ಕೂಡ ದರ್ಶನ್ ಆಪ್ತರಲ್ಲಿ ಒಬ್ಬರಾಗಿದ್ದು ಚುನಾವಣಾ ಪ್ರಚಾರಕ್ಕೆ ಗಜ ಬರ್ತಾರೆ ಎನ್ನಲಾಗ್ತಿದೆ.