ಶಿವಮೊಗ್ಗ : ಜಿಲ್ಲೆಯಲ್ಲಿ ಮುಂಗಾರು ತಡವಾದರು ಸಹ ಸಣ್ಣದಾಗಿ ಪ್ರಾರಂಭಗೊಂಡಿದೆ. ಆದರೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮಳೆ ಬಾರದೆ ಇದ್ದರೂ ಸಹ ವರುಣನ ಆಗಮನ ಮಲೆನಾಡ ರೈತರಿಗೆ ತುಸು ನೆಮ್ಮದಿ ತರಿಸಿದೆ.
ಇನ್ನು ಜಗತ್ ಪ್ರಸಿದ್ಧ ಜೋಗ ಜಲಪಾತಕ್ಕೆ ಮಳೆಯಿಂದ ಜೀವಕಳೆ ಬಂದಂತೆ ಆಗಿದೆ.
ಮುಂಗಾರು ಸುಮಾರು 40 ದಿನ ತಡವಾದರೂ ಜೋಗದಲ್ಲಿ ಶರಾವತಿ ಬಳಕುತ್ತಾ ಮೇಲಿಂದ ಧುಮ್ಮಿಕ್ಕುತ್ತಿದ್ದಾಳೆ. ರಾಜಾ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಕವಲುಗಳಲ್ಲಿ 960 ಅಡಿ ಎತ್ತರದಿಂದ ಶರಾವತಿ ನದಿ ಕೆಳಕ್ಕೆ ಬಿದ್ದು ಮುಂದೆ ಅರಬ್ಬಿ ಸಮುದ್ರಕ್ಕೆ ಸೇರ್ಪಡೆಯಾಗುತ್ತದೆ.
ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು : ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆಯೇ ಜೋಗ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜೋಗ ಜಲಪಾತವನ್ನು ನೋಡಲು ನಾಡಿನ ಎಲ್ಲಾ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜೋಗ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಕಾಮಗಾರಿಗಳು ನಡೆಯುತ್ತಿರುವುದರಿಂದ ಪ್ರವಾಸಿಗರಿಗೆ ಸ್ವಲ್ಪ ಕಿರಿಕಿರಿ ಉಂಟಾಗುತ್ತಿದೆ.
ಪ್ರವಾಸ ಕೈಗೊಂಡು ಜೋಗ ನೋಡಲು ಬಂದಿದ್ದ, ಕನಕಪುರದ ನಿವಾಸಿ ರೇಖಾ ಅವರನ್ನು ಈಟಿವಿ ಭಾರತ ಪ್ರತಿನಿಧಿ ಮಾತನಾಡಿಸಿದಾಗ “ನಾನು ಇದೇ ಮೊದಲ ಬಾರಿ ಜೋಗ ಜಲಪಾತವನ್ನು ನೋಡಲು ಬಂದಿದ್ದೇನೆ. ಜೋಗ ನೋಡಲು ನಿಜಕ್ಕೂ ಸುಂದರವಾಗಿದೆ. ಕನಕಪುರದಿಂದ ನಾವೆಲ್ಲಾ ಕುಟುಂಬ ಸಮೇತ ಬಂದಿದ್ದೇವೆ. ಮಳೆ ಜಾಸ್ತಿ ಬಂದ್ರೆ ಇನ್ನಷ್ಟು ಚೆನ್ನಾಗಿರುತ್ತದೆ. ಮುಂದಿನ ಬಾರಿ ಮತ್ತೊಮ್ಮೆ ಜೋಗ ವೀಕ್ಷಣೆಗೆ ಬರುತ್ತೇವೆ” ಎಂದು ಸಂತಸ ಹಂಚಿಕೊಂಡಿದ್ದಾರೆ.