ಹುಬ್ಬಳ್ಳಿ : ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತದೆ. ಜೊತೆಗೆ ಜಲಪ್ರಳಯ ಆಗುವ ಲಕ್ಷಣ ಇದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿಗಳು ಭವಿಷ್ಯ ನುಡಿದಿದ್ದಾರೆ. ನಗರದಲ್ಲಿಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಒಂದು ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಅದರಂತೆ ಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ ಎಂದು ಹೇಳಿದರು.
ಜಾಗತಿಕವಾಗಿ ಮೂರು ಗಂಡಾಂತರ ಕಾದಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರು ಅಕಾಲಿಕ ಮೃತ್ಯುವಿಗೆ ಸಿಲುಕುವ ಸೂಚನೆ ಇದೆ. ವಿಜಯ ದಶಮಿಯಿಂದ ಸಂಕ್ರಾಂತಿಯವರೆಗೆ ಈ ದುರ್ಘಟನೆಗಳು ನಡೆಯುತ್ತವೆ ಎಂದು ಶ್ರೀಗಳು ಹೇಳಿದರು. ಆಳುವವರು ಈಗಾಗಲೇ ಮುಂದಾಗುವ ಗಂಡಾಂತರ ಅರಿತರೇ ಪಾರಾಗಬಹುದು. ಇಲ್ಲದೇ ಹೋದಲ್ಲಿ ದುರ್ಘಟನೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.
ಕರುನಾಡಿಗೆ ಕೆಲವೊಂದು ಆಪತ್ತು ಇದೆ. ಕೆಲವು ಸಾವು ನೋವುಗಳು ಸಂಭವಿಸುತ್ತದೆ. ಈ ವೇಳೆ ದೈವ ಕೃಪೆಯಿಂದ ಪಾರಾಗಬಹುದು. ಭಾರತದಲ್ಲಿ ಒಂದು ದುರ್ಘಟನೆ ಆಗುತ್ತದೆ. ಅದನ್ನು ತಪ್ಪಿಸುವುದು ಆಳುವವರ ಕೈಯಲ್ಲಿದೆ. ಇದರಿಂದ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ ಎಂದು ಹೇಳಿದರು.
ರಾಜ್ಯದ ಮಳೆ ಬೆಳೆ ವಿಚಾರ : ರಾಜ್ಯದ ಮಳೆ ಬೆಳೆ ವಿಚಾರವಾಗಿ ಮಾತನಾಡಿರುವ ಶ್ರೀಗಳು,” ಸಾಕಷ್ಟು ಮಳೆಯಾಗುತ್ತದೆ. ಮುಂದೆ ಜಲಪ್ರಳಯ ಪ್ರಳಯವಾಗುವ ಲಕ್ಷಣ ಇದೆ. ಹೆಚ್ಚೇನೂ ತೊಂದರೆ ಆಗುವುದಿಲ್ಲ ಎಂದು ಹೇಳಿದರು.