Breaking News
Home / ಜಿಲ್ಲೆ / ಬೆಂಗಳೂರು / ಬಿಪಿಎಲ್ ಕಾರ್ಡ್‌ದಾರರ ಆಧಾರ್ ಲಿಂಕ್ ಕಡ್ಡಾಯ: ಅನ್ನಭಾಗ್ಯದ ಹಣ ಪಡೆಯುವುದು ಹೇಗೆ ಗೊತ್ತೇ?

ಬಿಪಿಎಲ್ ಕಾರ್ಡ್‌ದಾರರ ಆಧಾರ್ ಲಿಂಕ್ ಕಡ್ಡಾಯ: ಅನ್ನಭಾಗ್ಯದ ಹಣ ಪಡೆಯುವುದು ಹೇಗೆ ಗೊತ್ತೇ?

Spread the love

ಬೆಂಗಳೂರು : ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಕೊಡಬೇಕಿರುವ 5 ಕೆಜಿ ಅಕ್ಕಿ ಬದಲು ಹಣ ಕೊಡಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧರಿಸಿದೆ.

ಈ ಬೆನ್ನಲ್ಲೇ ಬಿಪಿಎಲ್ ಕಾರ್ಡ್‌ದಾರರಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಾಗಿದೆ.
ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯನ ಖಾತೆಗೆ 5 ಕೆಜಿ ಅಕ್ಕಿಯ ಜೊತೆ ಇನ್ನುಳಿದ 5 ಕೆಜಿ ಅಕ್ಕಿ ಬದಲಿಗೆ ಮಾಸಿಕ ತಲಾ 170 ರುಪಾಯಿ ಹಣ ನೀಡಲು ಬುಧವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಜುಲೈ 1ರಿಂದಲೇ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ.

ಕೇಂದ್ರ ಸರ್ಕಾರ ಸೇರಿದಂತೆ ಇತರ ರಾಜ್ಯಗಳ ಮೊರೆ ಹೋದರೂ ಅಕ್ಕಿ ಖರೀದಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ, ಹೆಚ್ಚುವರಿಯಾಗಿ ಅಕ್ಕಿ ಹೊಂದಿಸಲು ಪ್ರತಿ ತಿಂಗಳು ಎದುರಾಗಬಹುದಾದ ಸಮಸ್ಯೆಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಅನಾಯಾಸವಾಗಿ ವಾರ್ಷಿಕವಾಗಿ ಸಾವಿರಾರು ಕೋಟಿ ರೂ. ಹಣವನ್ನು ಸರ್ಕಾರ ಉಳಿತಾಯ ಮಾಡಲಿದೆ. ಸರ್ಕಾರದ ಜಾಣ ನಡೆಗೆ ಪರ- ವಿರೋಧಗಳು ವ್ಯಕ್ತವಾಗುತ್ತಿವೆ.

ಅನ್ನಭಾಗ್ಯದಡಿ ಕೆಜಿಗೆ 34 ರೂ. ಕೊಟ್ಟು ಖರೀದಿಸುವ ಅಕ್ಕಿ ಫಲಾನುಭವಿಗಳ ಕೈಸೇರಲು ಕನಿಷ್ಠ 40 ರಿಂದ 42 ರೂ. ಬೇಕಾಗುತಿತ್ತು. ಹೊರ ರಾಜ್ಯಗಳಿಂದ ಬರುವ ಅಕ್ಕಿ ಸಾಗಾಣಿಕೆ ವೆಚ್ಚ, ಖಾಸಗಿ ಗೋದಾಮುಗಳಲ್ಲಿ ಮಾಡಲಾಗುವ ದಾಸ್ತಾನು ವೆಚ್ಚ, ನಿರ್ವಹಣಾ ವೆಚ್ಚ, ಸೋರಿಕೆ, ಕಮಿಷನ್ ಹಾವಳಿ ಇದೆಲ್ಲವನ್ನೂ ಸೇರಿಸಿದರೆ ನಿಗದಿಗಿಂತ 6 ರಿಂದ 8 ರೂ. ಹೆಚ್ಚುವರಿ ಖರ್ಚು ಮಾಡಬೇಕಿತ್ತು. ಈಗ ಇದೆಲ್ಲದರ ತಲೆನೋವಿನಿಂದ ತಪ್ಪಿಸಿಕೊಳ್ಳುವಂತಾಗುತ್ತದೆ. ಇದರಿಂದ ವಾರ್ಷಿಕ ಅಂದಾಜು 1,500 ಕೋಟಿ ರೂ. ಸರ್ಕಾರಕ್ಕೆ ಉಳಿತಾಯ ಆಗಲಿದೆ.

ಅಂದಾಜು ಲೆಕ್ಕಾಚಾರದ ಪ್ರಕಾರ, ಒಬ್ಬ ವ್ಯಕ್ತಿಗೆ ಒಂದು ತಿಂಗಳಿಗೆ 5 ಕೆಜಿ ಅಕ್ಕಿ ನೀಡಲು ಕನಿಷ್ಠ 200 ರಿಂದ 210 ರೂ. ಖರ್ಚಾಗುತ್ತಿತ್ತು. ಈಗ ನೇರವಾಗಿ ಕೆಜಿಗೆ 34 ರೂ. ಅನ್ನು ಮನೆಯ ಯಜಮಾನನ ಖಾತೆಗೆ ಜಮೆ ಮಾಡುವುದರಿಂದ ಪ್ರತಿ ವ್ಯಕ್ತಿಗೆ 170 ರೂ. ಖರ್ಚಾಗುತ್ತದೆ. ಅದರಂತೆ 30 ರಿಂದ 40 ರೂ. ಉಳಿತಾಯವಾಗುತ್ತದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರಕಾರ, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ದಾರರ ಸಂಖ್ಯೆ 1.28 ಕೋಟಿ ಇದ್ದು, ಪ್ರತಿ ಕುಟುಂಬದಲ್ಲಿ ಸರಾಸರಿ ನಾಲ್ವರು ಸದಸ್ಯರ ಲೆಕ್ಕಹಾಕಿದರೂ 1,500 ಕೋಟಿ ರೂ.ಗಿಂತ ಹೆಚ್ಚು ಹಣ ಉಳಿತಾಯ ಆಗುತ್ತದೆ.

ಬಿಪಿಎಲ್‌ ಕಾರ್ಡ್‌ಗೆ ಆಧಾರ್ ಲಿಂಕ್ ಇದ್ದರೆ ಮಾತ್ರ ಬ್ಯಾಂಕ್‌ಗೆ ಹಣ : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು 1.28 ಕೋಟಿ ಇದ್ದು, ಇದರಲ್ಲಿ 1.22 ಕೋಟಿ ಮಂದಿ ಆಧಾರ್ ಲಿಂಕ್ ಮಾಡಿಸಿಕೊಂಡಿದ್ದಾರೆ. ಆದರೆ, ಇನ್ನೂ 6 ಲಕ್ಷ ಬಿಪಿಎಲ್ ಕಾರ್ಡ್‌ದಾರರು ಆಧಾರ್ ಲಿಂಕ್ ಮಾಡಿಸಿಲ್ಲ. ಆಧಾರ್ ಲಿಂಕ್ ಇದ್ದರೆ ಮಾತ್ರ ಐದು ಕೆಜಿ ಅಕ್ಕಿ ಬದಲಿಗೆ ಕೊಡುವ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಮನೆ ಯಜಮಾನನ ಬ್ಯಾಂಕ್ ಖಾತೆಗೆ ಹಣ ಹಾಕಲು ಸರ್ಕಾರ ನಿರ್ಧರಿಸಿದೆ.

ಅರ್ಜಿ ಸಲ್ಲಿಸುವ ಅಗತ್ಯವಿಲ್ಲ: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ನೀಡುವ ಹಣ ಪಡೆಯಲು ಜನರು ಯಾವುದೇ ಅರ್ಜಿ ಸಲ್ಲಿಸಬೇಕಿಲ್ಲ. ಸರ್ಕಾರದ ಬಳಿ ಇರುವ ಪಡಿತರ ಚೀಟಿದಾರರ ದತ್ತಾಂಶ ಆಧರಿಸಿ ಸರ್ಕಾರವೇ ‘ನೇರ ನಗದು ವರ್ಗಾವಣೆ’ (ಡಿಬಿಟಿ) ಮೂಲಕ ಹಣ ವರ್ಗಾವಣೆ ಮಾಡಲಿದೆ. ಈಗಾಗಲೇ ಪಡಿತರ ಚೀಟಿಗಳಿಗೆ ಆಧಾರ್ ಲಿಂಕ್ ಆಗಿದೆ. ಆಧಾರ್‌ಗೆ ಬ್ಯಾಂಕ್‌ ಖಾತೆ ಲಿಂಕ್ ಆಗಿರುತ್ತದೆ. ‘ಗೃಹಜ್ಯೋತಿ’ ಅಡಿ ನೋಂದಣಿ ಮಾಡುವ ಮಾಹಿತಿಯನ್ನೂ ಪೂರಕವಾಗಿ ಬಳಸಿಕೊಳ್ಳಲಾಗುತ್ತದೆ.

ಸಿಗುವ ಹಣವೆಷ್ಟು? : ಬಿಪಿಎಲ್ ಕುಟುಂಬದ ಒಬ್ಬರು ಸದಸ್ಯರಿದ್ದರೆ 170 ರೂ, ಇಬ್ಬರು ಸದಸ್ಯರಿದ್ದರೆ ತಿಂಗಳಿಗೆ 340 ರೂ, ಮೂವರು ಸದಸ್ಯರಿದ್ದರೆ 510 ರೂ., ನಾಲ್ಕು ಮಂದಿ ಇದ್ದರೆ, 680 ರೂ., ಕುಟುಂಬದಲ್ಲಿ ಐವರಿದ್ದರೆ 850 ರೂ. ಸಿಗಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಎಷ್ಟು ಜನರಿದ್ದರೂ ಎಲ್ಲರಿಗೂ ತಲಾ 170 ರೂ. ಹಣ ಸಿಗುತ್ತದೆ.

ರಾಜ್ಯದಲ್ಲಿನ ಪಡಿತರ ಚೀಟಿಗಳು ಆಧಾರ್ ಕಾರ್ಡ್ ಜತೆ ಲಿಂಕ್ ಆಗಿವೆ. ಹೀಗಾಗಿ ಶೇ.95 ರಷ್ಟು ಬಿಪಿಎಲ್, ಅಂತ್ಯೋದಯ ಕುಟುಂಬದ ನಿರ್ವಹಣೆ ಮಾಡುವ ವ್ಯಕ್ತಿಯ (ಮನೆಯೊಡೆಯ) ಬ್ಯಾಂಕ್ ಖಾತೆ ಮಾಹಿತಿ ನಮ್ಮ ಬಳಿ ಇದೆ. ಹಾಗಾಗಿ, ಕೆಲವು ತೊಡಕುಗಳನ್ನು ಸರಿಪಡಿಸಿಕೊಂಡು ಜುಲೈ 1 ರಿಂದಲೇ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ