ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಧರಣಿ ಸತ್ಯಾಗ್ರಹ ಒಂದು ರಾಜಕೀಯ ಗಿಮಿಕ್ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನೆಲಮಂಗಲದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್ವೈ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಯಡಿಯೂರಪ್ಪರಿಗೆ ಪ್ರತಿಭಟನೆ ಮಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಯಡಿಯೂರಪ್ಪ ಸರ್ಕಾರದಲ್ಲಿದ್ದಾಗ ಅವರು ತಮ್ಮ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಿದ್ದರಾ? ಎಂದು ಪ್ರಶ್ನಿಸಿದರು.
ನಾವು ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೆಸ್ ಬದ್ಧವಾಗಿದೆ. ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳನ್ನು ನಾವು ಜಾರಿ ಮಾಡುತ್ತೇವೆ. ನಾವು ಗ್ಯಾರಂಟಿಗಳ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಂಡಿದ್ದೇವೆ. ಯಡಿಯೂರಪ್ಪ ಅವರ ಪ್ರತಿಭಟನೆ ಕೇವಲ ರಾಜಕೀಯ ಗಿಮಿಕ್ ಅಷ್ಟೇ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಇದಕ್ಕೂ ಮೊದಲು ನೆಲಮಂಗಲದಲ್ಲಿ ನೂತನ ಶಾಸಕರಿಗಾಗಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರು ಎಲ್ಲಾ ಸಮಯದಲ್ಲೂ ವಿಧಾನಸಭೆಯಲ್ಲಿ ಇರಬೇಕು. ವಿಧಾನಸಭೆಗೆ ಬರುವುದರಿಂದ ಹಿರಿಯರು ಏನು ಮಾತನಾಡುತ್ತಾರೆ, ಸಂಸದೀಯ ಮಾತುಗಳು ಏನು ಎಂಬುದು ಅರ್ಥ ಆಗುತ್ತದೆ ಎಂದು ನೂತನ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದರು.
ಜೂನ್ 23 ರಂದು ಶುಕ್ರವಾರ ತುಮಕೂರಿನಲ್ಲಿ ಮಾತನಾಡಿದ್ದ ಯಡಿಯೂರಪ್ಪ ಅವರು, ಕಾಂಗ್ರೆಸ್ನವರು ಸುಳ್ಳು ಭರವಸೆ ಕೊಟ್ಟು ದ್ರೋಹ ಮಾಡಿದ್ದಾರೆ. ಅವರು ನುಡಿದಂತೆ ಗ್ಯಾರಂಟಿಗಳನ್ನು ಕೊಡಲಿ. ಉಚಿತ ಗ್ಯಾರಂಟಿ ಕೊಡೋವರೆಗೂ ಬಿಜೆಪಿಯಿಂದ ಹೋರಾಟ ನಡೆಯಲಿದೆ. ವಿಧಾನಸೌಧದಲ್ಲಿ ಹೋರಾಟ ಮಾಡುತ್ತೇವೆ. ಗ್ಯಾರಂಟಿಗಳನ್ನು ಕೊಡೋವರೆಗೂ ನಾವು ಸತ್ಯಾಗ್ರಹ ಮಾಡುತ್ತೇವೆ. ಅಧಿವೇಶನದ ಒಳಗೆ ನಮ್ಮ ಶಾಸಕರಿಂದ ಹೋರಾಟ. ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣ ಮುಗಿದ ಬಳಿಕ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ನಾನು ನಮ್ಮ ಮುಖಂಡರ ಜತೆ ಸತ್ಯಾಗ್ರಹ ಮಾಡುತ್ತೇನೆ ಎಂದಿದ್ದರು.