ಬೆಂಗಳೂರು: ಕಾಂಗ್ರೆಸ್ ಪಕ್ಷ ಕೊಟ್ಟ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು.
ಇಲ್ಲವಾದಲ್ಲಿ ಅವರು ಅಧಿಕಾರ ಬಿಟ್ಟು ತೊಲಗಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಸರ್ಕಾರದ ಮೂಗು ಹಿಂಡುವ ಕೆಲಸವನ್ನು ನಾವು ಮಾಡೋಣ. ಉಪವಾಸ ಸತ್ಯಾಗ್ರಹ ಮಾಡುವ ಅವಶ್ಯಕತೆ ಇಲ್ಲ. ಅಧಿವೇಶನ ಆರಂಭದ ದಿನದಿಂದ ನಾವು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಸೇರಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು. ನಾನು ಗಾಂಧಿ ಪ್ರತಿಮೆ ಎದುರು ಧರಣಿ ಕೂರುತ್ತೇನೆ. ಸದನದ ಒಳಗೆ ಶಾಸಕರು ಹೋರಾಟ ಮಾಡಿ ಕಾಂಗ್ರೆಸ್ನವರಿಗೆ ಪಾಠ ಕಲಿಸಬೇಕು. ಅಧಿಕಾರ ಮದದಿಂದ ಏನೇನೋ ಗ್ಯಾರಂಟಿ ಕೊಟ್ಟಿರುವ ಸಿದ್ದರಾಮಯ್ಯ ಈಗ ನರೇಂದ್ರ ಮೋದಿ ಮೇಲೆ ಬೊಟ್ಟು ಮಾಡಿ ತೋರಿಸ್ತಿದಾರೆ. ಅಕ್ಕಿ ಸೇರಿದಂತೆ ಐದು ಭರವಸೆಗಳನ್ನು ಈಡೇರಿಸಲೇಬೇಕು. ಹೋರಾಟದ ಮೂಲಕ ಈ ಸರ್ಕಾರಕ್ಕೆ ಪಾಠ ಕಲಿಸಬೇಕಿದೆ. ನಮ್ಮ ಶಾಸಕರು, ಒಂದು ದಿನ ಅಧಿವೇಶನ ನಡೆಸಲು ಬಿಡದೇ ಹೋರಾಟ ಮಾಡಬೇಕು. ರಾಜಕೀಯ ದೊಂಬರಾಟ ಮಾಡಲು ಬಿಡೋದಿಲ್ಲ ಎಂದು ಕಿಡಿಕಾರಿದರು.