Breaking News
Home / ಜಿಲ್ಲೆ / ಬೆಳಗಾವಿ / ಲಿಂಗಾಯತ ಒಳಪಂಗಡಗಳು ಒಟ್ಟಾಗಿ ಹೋದ್ರೆ ಮಾತ್ರ ಭವಿಷ್ಯ

ಲಿಂಗಾಯತ ಒಳಪಂಗಡಗಳು ಒಟ್ಟಾಗಿ ಹೋದ್ರೆ ಮಾತ್ರ ಭವಿಷ್ಯ

Spread the love

ಬೆಳಗಾವಿ: ಲಿಂಗಾಯತ ಒಳಪಂಗಡಗಳನ್ನು ಇಟ್ಟುಕೊಂಡು ನಾವು ಮುಂದುವರಿದರೆ ಮುಂದಿನ ದಿನಗಳಲ್ಲಿ ನಮಗೆಲ್ಲಾ ಒಳ್ಳೆಯ ದಿನಗಳಿವೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ನಗರದ ವೀರಶೈವ ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯ ಆವರಣದಲ್ಲಿ ಶನಿವಾರ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ ಆಯೋಜಿಸಿದ್ದ ವಿಧಾನಸಭೆಗೆ ಆಯ್ಕೆಯಾದ ಶಾಸಕ, ಸಚಿವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ವೇದಿಕೆ‌ ಮೇಲೆ ಇದ್ದಾಗ ಮಾತ್ರ ನಾವೆಲ್ಲಾ ಒಂದು ಎನ್ನುವ ಚಿಂತನೆ ಆಗುತ್ತದೆ. ವೇದಿಕೆ ಇಳಿದ ಮೇಲೆ ಅದರ ರೂಪುರೇಷೆಗಳೇ ಬದಲಾಗುತ್ತವೆ. ಈ ನಿಟ್ಟಿನಲ್ಲಿ ಹಿರಿಯರಾದ ನೀವು ಎಲ್ಲರನ್ನೂ ಒಗ್ಗೂಡಿಸಿ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ಇದು ಇವತ್ತಿನ ಸಂದರ್ಭದಲ್ಲಿ ಅತ್ಯಂತ ಅವಶ್ಯಕವಾಗಿದೆ. ಬಹಳಷ್ಟು ಜನರು ಒಳಪಂಗಡಗಳ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಅದು ಮುಂದಿನ ದಿನಗಳಲ್ಲಿ ನಮಗೆಲ್ಲಾ ಮಾರಕವಾಗಲಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಲಿಂಗಾಯತ ಒಳಪಂಗಡಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಪರಮಪೂಜ್ಯ ಸ್ವಾಮೀಜಿಗಳು ಹೆಚ್ಚು ಒತ್ತು ನೀಡಬೇಕು. ಅಂದಾಗ ಮಾತ್ರ ಏನಾದರು ಸಾಧನೆ ಮಾಡಲು, ಸಮಾಜ ಉಳಿಸಲು ಮತ್ತು ಬೆಳೆಸಲು ಸಾಧ್ಯವಾಗುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಸಮಾಜ ಹೋಗುತ್ತಿರುವ ದಿಕ್ಕು ನೋಡಿದರೆ ಮುಂದೆ ಕಷ್ಟದ ದಿನಗಳು ಬರುತ್ತವೆ. ನಮ್ಮನ್ನು ಒಡೆದು ಆಳುವ ನೀತಿ ಬಹಳ ದೂರವಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಹಿರಿಯರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರು, 12ನೇ ಶತಮಾನದಲ್ಲಿ ಆರಂಭಗೊಂಡಿರುವ ಶಿಕ್ಷಣ ಪ್ರಸಾರ ಇಂದಿಗೂ ನಿಂತಿಲ್ಲ. ಸಿರಸಂಗಿ ಟ್ರಸ್ಟ್​ನ ಸಹಾಯದಿಂದ ಸಹಾಯ ಪಡೆದು ದೇಶ ಕಟ್ಟಿದವರು ನಮ್ಮಲ್ಲಿದ್ದಾರೆ. ಬಡ ಹೆಣ್ಣು ಮಕ್ಕಳ ಸಲುವಾಗಿ ಪ್ರತಿ ಜಿಲ್ಲೆಯಲ್ಲಿ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಬೆಂಗಳೂರು ನಂತರ ಬೆಳಗಾವಿಯಲ್ಲಿ ವಸತಿ ನಿಲಯ ನಿರ್ಮಾಣಗೊಳ್ಳುತ್ತಿದೆ ಎಂದರು.

ಯಾವುದೇ ಪಕ್ಷದಿಂದ ಗೆದ್ದು ಬಂದರೂ ನಿಮ್ಮ ಹಿಂದೆ ಸಮಾಜವಿದೆ. ಸಮಾಜದಿಂದಲೇ ನೀವು ಎನ್ನುವ ಸತ್ಯ ಅರ್ಥ ಮಾಡಿಕೊಳ್ಳಬೇಕು. ಸಮಾಜದವರೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಅದೇ ರೀತಿ ಎಲ್ಲರೂ ಮುಂಬರುವ ಜನಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಬೇಕು ಎಂದು ಕರೆ ನೀಡಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸಮೀಕ್ಷೆ ಆಗಿರುವ ಜಾತಿ, ಆರ್ಥಿಕ ಗಣತಿ ವರದಿ ಹೊರಬರಬೇಕಿದೆ. ಲಿಂಗಾಯತ, ವೀರಶೈವ ಲಿಂಗಾಯತ ನಡುವೆ ಗೊಂದಲ ಮುಂದುವರೆದಿವೆ. ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕು ಎಂಬ ಚರ್ಚೆಯಿದೆ. ಇದರ ಜತೆಗೆ ಉಪ ಜಾತಿಗಳ ವಿಷಯ ಸಮಾಜಕ್ಕೆ ಆತಂಕ ತರುತ್ತಿದೆ. ಹಾಗಾಗಿ, ಸೂಕ್ಷ್ಮತೆ ಅರಿತು ನಾವೆಲ್ಲ ಕೆಲಸ ಮಾಡಬೇಕಿದೆ. ಸಮಾಜದ ಹಿರಿಯರಾದ ಡಾ. ಪ್ರಭಾಕರ ಕೋರೆ ಅವರು ಮುಂದಾಳತ್ವ ವಹಿಸಿಕೊಳ್ಳಬೇಕು. ಸಲಹೆ, ಸೂಚನೆ‌ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಶಾಸಕಿ ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ ಅವರನ್ನು ಸತ್ಕರಿಸಲಾಯಿತು. ಈ ವೇಳೆ ಕಾರಂಜಿಮಠದ ಗುರುಶಿದ್ಧ ಸ್ವಾಮೀಜಿ, ನಿಡಸೋಸಿ ದುರದುಂಡೀಶ್ವರ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸದರಾದ ಮಂಗಳಾ ಅಂಗಡಿ, ಬೆಳಗಾವಿ ಪ್ರಾದೇಶಿಕ ನಿವೃತ್ತ ಆಯುಕ್ತ ಎಂ.ಜಿ. ಹಿರೇಮಠ, ಮಾಜಿ ಎಂಎಲ್​ಸಿ ಮಹಾಂತೇಶ ಕವಟಗಿಮಠ, ಮಹಾಸಭೆ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಮುಖಂಡರಾದ ಎಂ.ಬಿ. ಜೀರಲಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ