ಬೆಂಗಳೂರು : ಎಲ್ಲಾ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಶಾಂತಿನಗರದ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಮಹಿಳಾ ಪ್ರಯಾಣಿಕರಿಗೆ ಬಸ್ ಪ್ರಯಾಣ ಉಚಿತ ಇರಲಿದೆ. ಎಲ್ಲ ಹೆಣ್ಣು ಮಕ್ಕಳು, ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ನಾಲ್ಕು ನಿಗಮಗಳ ಒಟ್ಟು ಆದಾಯ 8,946.85 ಕೋಟಿ ರೂ. ಇದೆ. ಒಟ್ಟು ಕಾರ್ಯಾಚರಣೆ ವೆಚ್ಚ 12,750.49 ಕೋಟಿ ರೂ. ಇದೆ. ನಾಲ್ಕು ನಿಗಮಗಳ ಆರ್ಥಿಕ ಪರಿಸ್ಥಿತಿ, ಕೋವಿಡ್ನಲ್ಲಿ ನಷ್ಟ, ಹೊಸ ಬಸ್ ಖರೀದಿ, ನೌಕರರ ನೇಮಕ ಬಗ್ಗೆ ಚರ್ಚೆ ಆಗಿದೆ. ಡಿಮ್ಯಾಂಡ್ ಇರೋ ಕಡೆ ಬಸ್ ಹಾಕಲು ಚರ್ಚೆ ಮಾಡಿದ್ದೀವಿ. ದೇಶದಲ್ಲೇ ಪ್ರತಿಷ್ಠಿತ ಸಾರಿಗೆ ಸಂಸ್ಥೆಗಳಾಗಿ ಬೆಳೆದಿವೆ ಎಂದರು.
ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಜೆಪಿಯವರಿಗೆ ಪ್ರತಿಭಟನೆ ಮಾಡಲು ಅವಕಾಶ ನೀಡಲ್ಲ. ಜನ ಬಿಜೆಪಿಗೆ ರೆಸ್ಟ್ ಮಾಡಲು ಹೇಳಿದ್ದಾರೆ. ಅವರು ಮನೆಯಲ್ಲಿ ರೆಸ್ಟ್ ಮಾಡಲಿ ಎಂದು ಟಾಂಗ್ ನೀಡಿದರು.
ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವ ಹಾಗೂ ಅದಕ್ಕೆ ತಗಲುವ ವೆಚ್ಚದ ಕುರಿತು ವರದಿ ಸಿದ್ಧವಾಗಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ಸಲ್ಲಿಕೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.