ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಬಂದ್ ಮಾಡಲಾಗಿದ್ದ ಪದವಿ ಕಾಲೇಜು ಆರಂಭಕ್ಕೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಆದರೆ ಪಿಯು ಕಾಲೇಜು ಸದ್ಯಕ್ಕೆ ಆರಂಭ ಇಲ್ಲ ಎಂದು ಹೇಳಲಾಗುತ್ತಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ನವೆಂಬರ್ 17ರಿಂದ ಎಲ್ಲಾ ಪದವಿ ಕಾಲೇಜುಗಳನ್ನು ಆರಂಭ ಮಾಡುವಂತೆ ತೀರ್ಮಾನಿಸಲಾಯಿತು. ಆದರೆ ಸಭೆಯಲ್ಲಿ ಪಿಯು ಕಾಲೇಜು ಆರಂಭದ ಬಗ್ಗೆ ಚರ್ಚೆಯಾಗಿಲ್ಲ.
ಪೋಷಕರ ಅನುಮತಿ ಕಡ್ಡಾಯ, ಯಾರಿಗೂ ಒತ್ತಡ ಮಾಡುವ ಹಾಗಿಲ್ಲ. ಆನ್ ಲೈನ್ ಹಾಗೂ ಆಫ್ ಲೈನ್ ಎರಡಲ್ಲೂ ತರಗತಿ ನಡೆಯುತ್ತದೆ. ದೀಪಾವಳಿ ನಂತರ ಕಾಲೇಜು ಪ್ರಾರಂಭ ಅಂತ ಪಬ್ಲಿಕ್ ಟಿವಿ ಮೊದಲೇ ವರದಿ ಮಾಡಿತ್ತು. ಈ ವರದಿ ನಿಜವಾಗಿದ್ದು, ದೀಪಾವಳಿ ಬಳಿಕ ರಾಜ್ಯದಲ್ಲಿ ಪದವಿ ಕಾಲೇಜು ಪ್ರಾರಂಭಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಮಾರ್ಗಸೂಚಿ ಪಾಲನೆಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ಹೆಗಲಿಗೆ ಹಾಕಲಾಗಿದೆ. ಮಾರ್ಗಸೂಚಿ ಪಾಲನೆಗೆ ಅಗತ್ಯ ಕ್ರಮವಹಿಸಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ನವೆಂಬರ್ 17 ರಿಂದ ಎಂಜಿನಿಯರಿಂಗ್, ಡಿಪ್ಲೊಮಾ, ಪದವಿ ಕಾಲೇಜು ಪ್ರಾರಂಭ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾಲೇಜಿಗೆ ಬರೋರು ರಿಜಿಸ್ಟರ್ ಮಾಡಿಕೊಳ್ಳಬೇಕು. ಅಲ್ಲದೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಕಾಲೇಜು ಬರೋರಿಗೆ ಇಲಾಖೆ ವ್ಯವಸ್ಥೆ ಮಾಡುತ್ತೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೂ ಅಗತ್ಯ ಮುಂಜಾಗ್ರತಾ ಕ್ರಮದ ವ್ಯವಸ್ಥೆ ಮಾಡುವುದಾಗಿ ನಿರ್ಧರಿಸಲಾಯಿತು.
ಪ್ರಾಕ್ಟಿಕಲ್ ಕ್ಲಾಸ್ಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಯುಜಿಸಿ ನಿಯಮದ ಪ್ರಕಾರ ಕಾಲೇಜು ಪ್ರಾರಂಭ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಒತ್ತಾಸೆ ಮೇರೆಗೆ ಕಾಲೇಜು ಪ್ರಾರಂಭ ಮಾಡುವ ನಿರ್ಧಾರ ಸಭೆಯಲ್ಲಿ ಮಾಡಲಾಯಿತು. ಪ್ರತಿ ಕಾಲೇಜಿನಲ್ಲಿ ಟಾಸ್ಕ್ ಫೋರ್ಸ್ ಇರುತ್ತೆ. ಅಲ್ಲದೆ ಪ್ರತಿ ಜಿಲ್ಲೆಗೆ ಡಿಸಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ಯಾರಿಗೂ ಒತ್ತಾಯ ಮಾಡಲ್ಲ. ಪೋಷಕರ ಅನುಮತಿ ಪತ್ರ ಕಡ್ಡಾಯ ಇರಬೇಕು ಎಂದು ಚರ್ಚಿಸಲಾಯಿತು.