ಬೆಂಗಳೂರು: ತರಗತಿ ಹಾಜರಾತಿ ಕೊರತೆಯಿಂದ 2023ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಿಂದ ವಂಚಿತರಾಗಿರುವ ಕಲಾ ಮತ್ತು ವಾಣಿಜ್ಯ ವಿಭಾಗದ 12,385 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅನುವು ಮಾಡಿಕೊಟ್ಟಿದೆ.
ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಮಂಡಳಿ ಅಧ್ಯಕ್ಷ ಆರ್.ರಾಮಚಂದ್ರನ್ ಅವರು, 2022-23ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ತರಗತಿ ವಿದ್ಯಾರ್ಥಿಗಳಾಗಿ ನೋಂದಾ ಯಿಸಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಹಾಜರಾತಿ ಕೊರತೆಯಿಂದ ಕಳೆದ ಮಾರ್ಚ್ನಲ್ಲಿ ಪರೀಕ್ಷೆಗೆ ಹಾಜರಾಗುವ ಅರ್ಹತೆ ಕಳೆದುಕೊಂಡಿದ್ದರು. ಇಂತಹ ಮಕ್ಕಳ ಪೈಕಿ ಕಲಾ ವಿಭಾಗದಲ್ಲಿ 7,985 ಮತ್ತು ವಾಣಿಜ್ಯ ವಿಭಾಗದಲ್ಲಿ 4,400 ಮಕ್ಕಳಿದ್ದಾರೆ. ಈ ಎರಡು ವಿಭಾಗದ ಒಟ್ಟು 12,385 ಮಕ್ಕಳಿಗೆ ಇದೇ ಮೇ 23ರಿಂದ ನಡೆಯುವ ಪೂರಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಮೇ 20ರೊಳಗೆ ತಮ್ಮ ತಮ್ಮ ಕಾಲೇಜುಗಳಿಗೆ ತೆರಳಿ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ ನೋಂದಾಯಿಸಬಹುದು ಎಂದು ತಿಳಿಸಿದ್ದಾರೆ.
ಈ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ ಪಾಠ ಕೇಳಿರುವುದರಿಂದ ಖಾಸಗಿ ವಿದ್ಯಾರ್ಥಿಗಳಾಗಿ ಈಗಲೇ ಪರೀಕ್ಷೆ ಬರೆದರೆ ಉತ್ತೀರ್ಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ ಅವರು ಮತ್ತೆ ಕಾಲೇಜಿಗೆ ಪ್ರವೇಶ ಪಡೆದು ಒಂದು ವರ್ಷ ಬಳಿಕ ಪರೀಕ್ಷೆ ಬರೆಯುವುದರಿಂದ ಅವರ ಸಮಯ ವ್ಯರ್ಥವಾಗಲಿದೆ. ಹಾಗಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.