ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಪಠ್ಯಪುಸ್ತಕ ಪರಿಷ್ಕರಣೆಯ ಭವಿಷ್ಯ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈಗಾ ಗಲೇ ಶೇ.90ರಷ್ಟು ಪಠ್ಯ ಪುಸ್ತಕಗಳು ವಿತರಣೆಯಾಗಿದ್ದು, ಇದೇ 29ರಿಂದ ಆರಂಭವಾಗಲಿರುವ 2023-24ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಪರಿಷ್ಕೃತ ಪಠ್ಯವನ್ನೇ ಓದುತ್ತಾರೋ ಅಥವಾ ಪಠ್ಯ ಪುಸ್ತಕ ಇನ್ನೊಮ್ಮೆ ಪರಿಷ್ಕೃತ ಗೊಳ್ಳಲಿದೆಯೇ ಎಂಬ ಚರ್ಚೆ ಆರಂಭಗೊಂಡಿದೆ.
ಬಿಜೆಪಿ ಸರಕಾರ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚಿಸಿ 5ರಿಂದ 10ನೇ ತರಗತಿ ವರೆಗಿನ ಕೆಲವು ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿತ್ತು. ಇದನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಠ್ಯಪುಸ್ತಕವನ್ನು ಸಾರ್ವಜನಿಕವಾಗಿ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು. ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿ ಭಟನೆಯಲ್ಲಿ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಮುಂತಾದವರು ಪಾಲ್ಗೊಂಡಿದ್ದರು.
ಶೈಕ್ಷಣಿಕ ವರ್ಷ ಆರಂಭದ ದಿನದಂದೇ ಮಕ್ಕಳ ಕೈಯಲ್ಲಿ ಪಠ್ಯಪುಸ್ತಕ ಇರಬೇಕು. ಇದರಿಂದ ವೇಳಾ ಪಟ್ಟಿಯಂತೆ ಸುಸೂತ್ರವಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಈಗಾಗಲೇ ಪರಿಷ್ಕೃತ ಪಠ್ಯವನ್ನು ವಿತರಿಸಲಾಗಿದೆ. ಆದರೆ ಹೊಸ ಸರಕಾರ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ ಈ ವರ್ಷದಲ್ಲೇ ವಿತರಿಸಲು ಮುಂದಾದರೆ ಶೈಕ್ಷಣಿಕ ಚಟುವಟಿಕೆ ಗಳು ಅಸ್ತವ್ಯಸ್ತವಾದೀತು. ಅಲ್ಲದೆ ಪಠ್ಯ ಪುಸಕ್ತ ಪರಿಷ್ಕರಣೆಗೆಂದು ಹೊಸ ಸಮಿತಿ ರಚಿಸಿ, ಅದರ ವರದಿ ಆಧರಿಸಿ ಪರಿಷ್ಕರಿಸಬೇಕಾಗುತ್ತದೆ.