ಯಾದಗಿರಿ, ಏಪ್ರಿಲ್. 18: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಹಲವು ಕುತೂಹಲಕಾರಿ ವಿಷಯಗಳು ಹೊರಬರುತ್ತಿವೆ. ಅಭ್ಯರ್ಥಿಗಳ ಆಸ್ತಿ ಘೋಷಣೆ ಕೇಳಿ ಜನಸಾಮಾನ್ಯರು ತಲೆ ಸುತ್ತಿ ಬಿದ್ದರೇ, ಮತ್ತೆ ಕೆಲವು ಅಭ್ಯರ್ಥಿಗಳು ಚುನಾವಣಾ ಠೇವಣಿ ಹಣ ಕಟ್ಟುವ ಸಮಯದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.
ಸೋಮವಾರವಷ್ಟೇ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಇಡಲು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯೊಬ್ಬರು ಬುಟ್ಟಿಯಲ್ಲಿ ರಾಶಿ ರಾಶಿ ನಾಣ್ಯಗಳನ್ನು ತಂದು ಚುನಾವಣಾ ಅಧಿಕಾರಿಗಳ ಮುಂದಿಟ್ಟಿದ್ದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ತಂದಿಟ್ಟ ಬುಟ್ಟಿ ನೋಡಿ ಚುನಾವಣಾ ಅಧಿಕಾರಿಗಳು ಸುಸ್ತಾಗಿದ್ದರು. ಈಗ ಇಂತಹದ್ದೇ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಮೇ 10 ಎಂದು ನಡೆಯಲಿರುವವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಯಾದಗಿರಿ ಜಿಲ್ಲೆಯಲ್ಲಿ ಯುವ ಸ್ವತಂತ್ರ ಅಭ್ಯರ್ಥಿಯೊಬ್ಬರು ತಮ್ಮ ಠೇವಣಿ ಹಣ 10,000 ರೂಪಾಯಿಗಳನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳಲ್ಲಿ ಪಾವತಿಸಿದ್ದಾರೆ. ಹತ್ತು ಸಾವಿರ ನಾಣ್ಯಗಳನ್ನು ನೀಡುವ ಮೂಲಕ ಚುನಾವಣಾ ಅಧಿಕಾರಿಗಳಿಗೆ ಚಿಲ್ಲರೆ ಎಣಿಸುವ ಕೆಲಸಕ್ಕೆ ನೂಕಿದ್ದಾರೆ.