ಬೆಂಗಳೂರು: ರಾಜ್ಯದಲ್ಲಿ 500ಕ್ಕೂ ಹೆಚ್ಚು ಕೊರೊನಾ ವಾರಿಯರ್ ಗಳು ಪ್ರಾಣ ಕಳೆದುಕೊಂಡಿದ್ದು, ರಾಜ್ಯ ಸರ್ಕಾರ ಮಾತ್ರ ಒಂದೇ ಕುಟುಂಬಕ್ಕೆ ಪರಿಹಾರ ನೀಡಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಮ್ಮನ ಉಳಸಿಕೊಡಿ ಎಂದು ಮನವಿ ಮಾಡಿಕೊಂಡ ಪುತ್ರಿಗೆ ಶಿಕ್ಷಣ ಸಚಿವರು ಹೃದಯಹೀನ ಉತ್ತರ ನೀಡಿದ್ದಾರೆ. ಇಂತಹ ಸರ್ಕಾರದಿಂದ ಜನರು ಏನು ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕೊರೊನ ಸಂದರ್ಭದಲ್ಲೂ ನಾಗರಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜೀವ ಪಣಕ್ಕಿಟ್ಟು ಕೆಲಸ ಮಾಡಿದ 500ಕ್ಕೂ ಹೆಚ್ಚು ಕೊರೊನ ವಾರಿಯರ್ ಗಳು ಜೀವ ಕಳೆದುಕೊಂಡಿದ್ದು, ಆ ಪೈಕಿ ಕೇವಲ ಒಂದೇ ಒಂದು ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ ಎಂಬ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹುದು. ಕೇವಲ ಬಾಯಿ ಚಪಲ ತೀರಿಸಿಕೊಳ್ಳಲು ಕೊರೊನ ವಾರಿಯರ್ಗಳನ್ನು ಭೇಷ್ ಎನ್ನುವ ಸರ್ಕಾರ, ಅವರ ಜೀವದ ಜತೆ ಆಟವಾಡುತ್ತಿದೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ತಮ್ಮ ಸರ್ವಸ್ವವನ್ನೇ ಬಲಿಕೊಟ್ಟ ಕೊರೊನ ವಾರಿಯರ್ ಕುಟುಂಬಗಳಿಗೆ ತಾನೇ ಘೋಷಿಸಿದಂತೆ ಪರಿಹಾರ ಕೊಡದಿದ್ದರೆ ಸರ್ಕಾರ ಇದ್ದರೆಷ್ಟು? ಬಿಟ್ಟರೆಷ್ಟು?