ಅತ್ತ ಬಣ್ಣ ಬಣ್ಣದ ಗಿಫ್ಟ್ಗಳನ್ನ ನೀಡಿ ಜನನಾಯಕರು ಮತಬೇಟೆಗೆ ಸಜ್ಜಾಗಿದ್ರೆ ಇತ್ತ ಪೊಲೀಸರು ಅವರನ್ನೇ ಬೇಟೆಯಾಡ್ತಿದ್ದಾರೆ. ರಾಜ್ಯದ ಎಂಟು ದಿಕ್ಕುಗಳ ಮೇಲೂ ಕಣ್ಣಿಟ್ಟಿರೋ ಚುನಾವಣಾ ಆಯೋಗ ಅಕ್ರಮಗಳಿಗೆ ಕಡಿವಾಣಹಾಕಿ ಕೋಟಿ ಕೋಟಿ ಹಣವನ್ನ ಸೀಜ್ ಮಾಡ್ತಿದೆ.
ರಾಜ್ಯದ ಅಷ್ಠ ದಿಕ್ಕುಗಳಲ್ಲೂ ವಿಧಾನ ಸಭಾ ಚುನಾವಣೆಯ ಕಾವು ಹಬ್ಬಿದೆ. ಮತದಾರರ ಮನವೊಲಿಸಿ ಮತಬೇಟೆಯಾಡಲು ನಾಯಕರು ಗಿಫ್ಟ್ ಅಸ್ತ್ರದ ಮೊರೆಹೋಗ್ತಿದ್ದಾರೆ. ಹೀಗಾಗಿ ಜನಪ್ರತಿನಿಧಿಗಳ ಗಿಫ್ಟ್ ದರ್ಬಾರ್ಗೆ ಬ್ರೇಕ್ ಹಾಕಿ ಚುನಾವಣಾ ಆಯೋಗ ಅಕ್ರಮಗಳಿಗೆ ಕಡಿವಾಣ ಹಾಕ್ತಿದೆ. ರಾಜ್ಯದ ಮೂಲೆಯಲ್ಲೂ ಹದ್ದಿನ ಕಣ್ಣಿಟ್ಟು ಭರ್ಜರಿ ಬೇಟೆಯಾಡ್ತಿದೆ.
17 ಕೆಜಿ ಚಿನ್ನ ಹಾಗೂ ಬೆಳ್ಳಿಯನ್ನ ವಶಕ್ಕೆ ಪಡೆದ ಪೊಲೀಸರು
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಬಳಿಯ ಚೆಕ್ ಪೋಸ್ಟ್ನಲ್ಲಿ ಚಿನ್ನದ ಖಜಾನೆಯೇ ಪೊಲೀಸರ ವಶವಾಗಿದೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6 ಕೋಟಿ 44 ಲಕ್ಷ ಮೌಲ್ಯದ 17 ಕೆಜಿ ಚಿನ್ನ ಹಾಗೂ ಬೆಳ್ಳಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದ್ದಾರೆ.
ಇನ್ನೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲೂ 2.50 ಲಕ್ಷ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫಾರ್ಚುನರ್ ವಾಹನದಲ್ಲಿ ಬಂದಿದ್ದ ಪಾವಗಡ ಮೂಲದ ವೈದ್ಯಾಧಿಕಾರಿ ಧರ್ಮಸ್ಥಳ ಹಾಗೂ ಕಟೀಲ್ ದೇವಸ್ಥಾನದ ಹುಂಡಿಗೆ ಈ ಹಣ ತಂದಿದ್ದರು ಅಂತ ಹೇಳಾಗ್ತಿದೆ.
ಯಾದಗಿರಿ ಜಿಲ್ಲೆಯ ಪುಟಪಾಕ್ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 3 ಲಕ್ಷ 30 ಸಾವಿರ ರೂ. ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೆಲಂಗಾಣದ ಗುರಮುಟ್ಲಾದಿಂದ ಗುರುಮಠಕಲ್ ಕಡೆಗೆ ಬರುತ್ತಿದ್ದ ಕ್ರೂಸರ್ನಲ್ಲಿ ಹಣ ಪತ್ತೆಯಾಗಿದೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಚಿನ್ನ ಸೀಜ್
ಇನ್ನೂ ಗದಗದ ಹುಬ್ಬಳ್ಳಿ ಹೈವೇನಲ್ಲಿ ನಿರ್ಮಿಸಿರೋ ದುಂದೂರು ಚೆಕ್ ಪೋಸ್ಟ್ನಲ್ಲಿ ಸಹ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಲಕ್ಷ ರೂ. ಹಣವನ್ನ ಸೀಜ್ ಮಾಡಲಾಗಿದೆ. ಇನ್ನೊಂದೆಡೆ ಮುಂಡರಗಿ ರಸ್ತೆಯಲ್ಲಿ ನಿರ್ಮಿಸಿರೋ ಜೆಟಿ ಕಾಲೇಜ್ ಚೆಕ್ಪೋಸ್ಟ್ ನಲ್ಲಿ ಕಾಂಗ್ರೆಸ್ ಪಕ್ಷದ ಶಾಲುಗಳನ್ನ ವಶಕ್ಕೆ ಪಡೆಯಲಾಗಿದೆ.
ಗುಮ್ಮಟನಗರಿ ವಿಜಯಪುರದಲ್ಲಿ ಚುನಾವಣೆ ಹೊತ್ತಲ್ಲೇ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ಎರಡನೇ ಬಾರಿ ಬಾಲಾಜಿ ಶುಗರ್ಸ್ ಮೇಲೆ ಚುನಾವಣಾಧಿಕಾರಿಗಳ ದಾಳಿ ಮಾಡಿದ್ದಾರೆ. ಈ ವೇಳೆ 40 ಲಕ್ಷ ರೂಪಾಯಿ ಮೌಲ್ಯದ ಗಿಫ್ಟ್ ಐಟಂ ಪತ್ತೆಯಾಗಿದೆ. ಕಲಬುರಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿರ್ಮಾಣ ಮಾಡಲಾಗಿರೋ 42 ಚೆಕ್ ಪೋಸ್ಟ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 4.5 ಕೋಟಿ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಐಬಿ ಕ್ರಾಸ್ ಬಳಿ ಸಹ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಲಕ್ಷ ಐದು ಸಾವಿರ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.