ಬೆಳಗಾವಿ: ‘ಇಡೀ ದೇಹದ ಅಂಗಾಗಂಗಳಲ್ಲಿ ಕಿಡ್ನಿ ಅತ್ಯಂತ ಹೆಚ್ಚು ಕೆಲಸಗಳನ್ನು ಮಾಡುತ್ತದೆ. ಕಿಡ್ನಿ ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಜೀವನಪೂರ್ತಿ ಅನಾರೋಗ್ಯ ಕಾಡುತ್ತದೆ’ ಎಂದು ಕಾಹೆರ್ನ ಕುಲಪತಿ ಡಾ.ನಿತಿನ್ ಗಂಗಾನೆ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಪ್ರೊಲಾಜಿ ವಿಭಾಗವು ಗುರುವಾರ ಏರ್ಪಡಿಸಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಿಡ್ನಿ ಆರೋಗ್ಯದ ಕುರಿತು ಸಾಮಾನ್ಯರಿಗೂ ತಿಳಿಯುವ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. ಅವಶ್ಯವಿರುವ ವೈದ್ಯಕೀಯ ಸೌಲಭ್ಯ, ಅಂಗಾಂಗ ದಾನದ ಕಾರ್ಯ ಹಾಗೂ ಕಸಿ ನೆರವೇರಿಸುವಲ್ಲಿ ಇನ್ನೂ ಹೆಚ್ಚು ಕಾರ್ಯಪ್ರವೃತ್ತರಾಗಬೇಕು’ ಎಂದರು.
‘ವೈದ್ಯವಿಜ್ಞಾನ ಸಾಕಷ್ಟು ಮುಂದುವರೆದಿದ್ದರೂ ಕಿಡ್ನಿ ಹಾಳಾದರೆ ಡಯಾಲಿಸಿಸ್ ಅಥವಾ ಕಸಿ ಮಾಡುವುದೊಂದೇ ಪರಿಹಾರ. ಅದರ ಕುರಿತು ಇನ್ನೂ ಹೆಚ್ಚಾಗಿ ಕಾರ್ಯಪ್ರವೃತ್ತರಾಗಿ ಕಿಡ್ನಿ ರೋಗಿಗಳ ತೊಂದರೆಯನ್ನು ತಪ್ಪಿಸಲು ಪ್ರಯತ್ನಿಸಬೇಕು. ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡದಲ್ಲಿನ ಹರಳು ಹಾಗೂ ಮೂತ್ರನಾಳದ ಸೋಂಕು ತಗಲದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ಎಂ. ದಯಾನಂದ ಮಾತನಾಡಿ, ‘ಕಳೆದ 20 ವರ್ಷಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಲಭಿಸುತ್ತಿದ್ದು, ಸಾಮಾನ್ಯರೊಂದಿಗೆ ಕಿಡ್ನಿ ಕಸಿ ಮಾಡಿಸಿಕೊಂಡ ರೋಗಿಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಿ. ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ಅತ್ಯಾಧುನಿಕ ಸೌಲಭ್ಯಗಳ ಡಾಯಾಲಿಸಿಸ್ ಯಂತ್ರ ಹಾಗೂ ಕಿಡ್ನಿ ಸಂಬಂಧಿತ ಸಕಲ ಚಿಕಿತ್ಸಾ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ’ ಎಂದರು.
ಕಾಹೆರ್ನ ಕುಲಸಚಿವ ಡಾ.ವಿ.ಎ. ಕೋಠಿವಾಲೆ ಮಾತನಾಡಿ, ‘ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಬೇಕು. ಸುಮಾರು 30 ವರ್ಷಗಳ ಕಾಲ ಡಯಾಲಿಸಿಸ್ ಮೇಲೆ ಇದ್ದು ಸಹಜವಾದ ಜೀವನ ನಡೆಸುತ್ತಿದ್ದಾರೆ. ಹಾಗಾಗಿ, ಭಯ ಪಡಬೇಕಾಗಿಲ್ಲ’ ಎಂದರು.
ಡಾ.ಮಲ್ಲಿಕಾರ್ಜುನ ಕರಿಶೆಟ್ಟಿ ಮಾತನಾಡಿದರು. ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ರಾಜೇಶ ಪವಾರ, ಡಾ.ರಿತೇಶ ವೆರ್ಣೆಕರ, ಡಾ.ರವಿ ಸರ್ವಿ, ಡಾ.ಎಸ್.ಐ. ನೀಲಿ, ಡಾ.ಎಸ್.ಸಿ. ಮೆಟಗುಡ್, ಶಕುಂತಲಾ ಕೋರೆ, ಅನಿಲ ಇಂಗಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪ್ರಮೋದ ಸೂಳಿಕೇರಿ ನಿರೂಪಿಸಿದರು.