ಗೋಕಾಕ: ‘ನನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಭಾವನೆಯೊಂದಿಗೆ ಮಹಿಳೆ ಬದುಕಿನಲ್ಲಿ ಸಂಘರ್ಷಕ್ಕೆ ಇಳಿದರೆ, ಅಸಾಧ್ಯವಾದುದನ್ನೂ ಸಾಧಿಸಲು ಸಾಧ್ಯ’ ಎಂದು ಪದ್ಮಶ್ರೀ ಪುರಸ್ಕೃತರಾದ ಡಾ.ಕಲ್ಪನಾ ಸರೋಜ್ ಹೇಳಿದರು.
ನಗರದ ಶೂನ್ಯ ಸಂಪಾದನಾ ಮಠದಲ್ಲಿ ಶುಕ್ರವಾರ ರಾತ್ರಿ ಬಸವ ಸ್ವಾಮಿಜಿ ಅವರ 18ನೇ ಸ್ಮರಣೋತ್ಸವ ಅಂಗವಾಗಿ ನಡೆದ 18ನೇ ಶರಣ ಸಂಸ್ಕೃತಿ ಉತ್ಸವದ ಮಹಿಳಾ ಸಮಾವೇಶದಲ್ಲಿ ಮಠದಿಂದ ನೀಡಲಾದ ‘ಕಾಯಕಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಪುರುಷ ಪ್ರಧಾನ ದೇಶದಲ್ಲಿ ಸ್ತ್ರೀಯರು ಸಹ ಸಮಾನರಾಗಿ ಬದುಕಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅವರು ನಮಗೆ ಆದರ್ಶರಾಗಬೇಕು. ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುವಾಗ ತುಂಬ ಕಷ್ಟಗಳು ಬರುತ್ತವೆ. ಅವುಗಳನ್ನು ಎದುರಿಸುವ ಧೈರ್ಯವನ್ನು ಮಹಿಳೆ ಪ್ರದರ್ಶಿಸಬೇಕು’ ಎಂದರು.
ತಮ್ಮ 12ನೇ ವಯಸ್ಸಿನಿಂದ ಎದುರಿಸಿದ ಹಲವು ಸಮಸ್ಯೆಗಳನ್ನು ತಾವು ಎದುರಿಸಿ, ಬೆಳೆದು ಉದ್ಯಮಪತಿಯಾದ ದಾರಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಂತಕಿ ವೀಣಾ ಬನ್ನಂಜೆ, ‘ಜೀವನದಲ್ಲಿ ನಾವು ನುಡಿದಂತೆ ನಡೆದರೆ ಮಾತ್ರ ಭವಿಷ್ಯವಿದೆ’ ಎಂದರು.
ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಧಾರವಾಡದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.
ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ರಾಜೇಶ್ವರಿ ಈರನಟ್ಟಿ, ಸುನೀತಾ ನಿಂಬರಗಿ, ದೀಪಾ ಪಾಟೀಲ, ಮಂಗಲಾ ಕಮತ, ನಾಗರತ್ನ ರಾಮಗೌಡ, ಡಾ.ನೀತಾ ರಾವ್, ವಿಜಯಲಕ್ಷ್ಮಿ ಹಿರೇಮಠ, ನಿಕೇತಾ ಹಿರೇಮಠ, ಕಾವ್ಯಾ ಮುಚ್ಚಂಡಿಹಿರೇಮಠ, ಸುಶ್ಮಿತಾ ಭಟ್, ಉತ್ಸವ ಆಚರಣೆ ಸಮಿತಿ ಅಧ್ಯಕ್ಷ ಕೆಎಲ್ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಇದ್ದರು. ಶಿಕ್ಷಕ ಆರ್.ಎಲ್.ಮಿರ್ಜಿ ಮತ್ತು ಮುಖ್ಯಶಿಕ್ಷಕ ಎಸ್.ಕೆ.ಮಠದ ನಿರೂಪಿಸಿದರು