ಶಿವಮೊಗ್ಗ: ‘ಬಿ.ಎಸ್. ಯಡಿಯೂರಪ್ಪ ಅವರ ಕಣ್ಣೀರಿನ ಶಾಪ ಬಿಜೆಪಿಗೆ ತಟ್ಟಲಿದೆ. ಯಡಿಯೂರಪ್ಪ ಇಲ್ಲದ ಈ ಬಾರಿಯ ಚುನಾವಣೆಯಲ್ಲಿ 40 ಸ್ಥಾನ ಗೆಲ್ಲಲು ಆ ಪಕ್ಷಕ್ಕೆ ಸಾಧ್ಯವಿಲ್ಲ’ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಲೇವಡಿ ಮಾಡಿದರು.
‘ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿ.ಎಸ್. ಯಡಿಯೂರಪ್ಪ ಕಣ್ಣೀರು ಹಾಕಿದ್ದರು. ಅಂದರೆ ಬಿಜೆಪಿಯಲ್ಲಿನ ದುಷ್ಟ ಶಕ್ತಿಗಳಾದ ಕೆ.ಎಸ್. ಈಶ್ವರಪ್ಪ, ಸಿ.ಟಿ.ರವಿ ಹಾಗೂ ಬಸನಗೌಡ ಯತ್ನಾಳ ಷಡ್ಯಂತ್ರದಿಂದ ಯಡಿಯೂರಪ್ಪ ಕಣ್ಣೀರಿಟ್ಟಿದ್ದಾರೆ. ಯಡಿಯೂರಪ್ಪ ಅವರನ್ನು ಬಿಟ್ಟು ಚುನಾವಣೆ ನಡೆಸುವುದಾದರೆ ಬಿಜೆಪಿ 40 ಸೀಟು ಪಡೆಯುವುದು ಕಷ್ಟ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
‘ಯಡಿಯೂರಪ್ಪ ಇದ್ದಾಗಲೂ ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿರಲಿಲ್ಲ. ಈಗ ಅವರು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದಾರೆ. ಈಗ ಎಷ್ಟು ಸ್ಥಾನಗಳು ಬರುತ್ತೆವೆಯೋ ನೋಡೋಣ’ ಎಂದು ಸವಾಲು ಹಾಕಿದರು.
‘ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಆಗಿರುವುದು ಸಂತೋಷ ತಂದಿದೆ. ಅದಕ್ಕೆ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವೆ. ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಅದನ್ನು ನಿವಾರಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗುವುದನ್ನು ಕಡ್ಡಾಯಗೊಳಿಸಿರುವುದಕ್ಕೆ ವಿರೋಧವಿದೆ’ ಎಂದರು.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಈ ದೇಶ ಕಂಡ ಉಕ್ಕಿನ ಮನುಷ್ಯ ವಲ್ಲಭ ಬಾಯ್ ಪಟೇಲರಿಗೆ ಹೋಲಿಸಿದ್ದಾರೆ. ಈಶ್ವರಪ್ಪನವರೇ ಮಹಿಷಾಸುರ ಇದ್ದಂತೆ. ಜೈಲಿಗೆ ಹೋದ ಅಮಿತ್ ಶಾ ಅವರನ್ನು ಪಟೇಲರಿಗೆ ಹೋಲಿಸುವ ಕೆಲಸ ಬೇಡ’ ಎಂದು ಹೇಳಿದರು.
ಈಡಿಗ ನಿಗಮ ಘೋಷಣೆ ಮಾತ್ರ; ಹಣವಿಲ್ಲ
ಈಡಿಗ ಸಮುದಾಯದ ಅಭಿವೃದ್ಧಿಗಾಗಿ ನಿಗಮ ರಚಿಸುವುದಾಗಿ ಹೇಳಿ ರಾಜ್ಯ ಸರ್ಕಾರ ಕಿವಿಗೆ ಹೂವಿಟ್ಟಿದೆ. ನಿಗಮ ರಚನೆ ಘೋಷಣೆಯಾಗಿದೆ. ಆದರೆ ಬಳಕೆಗೆ ಹಣ ಎಲ್ಲಿದೆ ತಿಳಿಸಿ ಎಂದು ಬೇಳೂರು ಸವಾಲು ಹಾಕಿದರು.
‘ಬೇರೆ ಸಮಾಜಕ್ಕೆ ನೀಡಿದಂತೆ ಈಡಿಗ ಸಮಾಜದ ನಿಗಮಕ್ಜೂ ₹ 500 ಕೋಟಿ ಹಣ ತೆಗೆದಿಡಿ’ ಎಂದು ಒತ್ತಾಯಿಸಿದರು.