ಬೆಂಗಳೂರು : ದಕ್ಷಿಣ ಚಿತ್ರರಂಗದಲ್ಲಿ ಶನಿವಾರ ಮತ್ತೊಂದು ದುರಂತ ಸಂಭವಿಸಿದ್ದು ನಂದಮೂರಿ ನಾಯಕ ತಾರಕ ರತ್ನ(39) ನಿಧನ ಹೊಂದಿದ್ದಾರೆ. ಕಳೆದ 22 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ನಂದಮೂರಿ ಕುಟುಂಬ ತೀವ್ರ ನೊಂದಿದ್ದು, ಟಾಲಿವುಡ್ ಬೆಚ್ಚಿಬಿದ್ದಿದೆ. ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಶನಿವಾರ ಅವರ ಆರೋಗ್ಯ ಮತ್ತೆ ಹದಗೆಟ್ಟು ನಾರಾಯಣ ಹೃದಯಾಲಯದ ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.ತಾರಕರತ್ನ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ
ತಾರಕರತ್ನ ಅವರು ತೆಲುಗು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್ ನಂದಮೂರಿ ಮೋಹನ ಕೃಷ್ಣ ಅವರ ಪುತ್ರ. ಅವರು ತೆಲುಗು ನಟ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ ಮೊಮ್ಮಗ. 2012ರಲ್ಲಿ ಅಲೇಖ್ಯಾ ರೆಡ್ಡಿ ಅವರನ್ನು ವಿವಾಹವಾಗಿದ್ದರು.
ಇತ್ತೀಚೆಗೆ ನಾರಾ ಲೋಕೇಶ್ ಆಯೋಜಿಸಿದ್ದ ‘ಯುವಗಳಂ’ ಪಾದಯಾತ್ರೆ ವೇಳೆ ಅವರು ಅಸ್ವಸ್ಥರಾಗಿದ್ದರು. ತಕ್ಷಣ ತಾರಕರತ್ನ ಅವರನ್ನು ಕುಪ್ಪಂ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ತಾರಕರತ್ನ ಅವರನ್ನು ರಕ್ಷಿಸಲು ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರು.ವಿದೇಶದಿಂದಲೂ ವಿಶೇಷ ವೈದ್ಯಕೀಯ ತಂಡ ಬಂದಿತ್ತು. ಆದರೆ ಯಾವುದೇ ಫಲ ಸಿಗಲಿಲ್ಲ.