ನವದೆಹಲಿ ಶೀವಸೇನೆಯ ಬಿಲ್ಲು ಮತ್ತು ಬಾಣ ಚಿಹ್ನೆಯ ನಿಜವಾದ ವಾರಸುದಾರ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣ ಎಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸುವ ಮೂಲಕ ಬಾಳಾ ಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಶಿವಸೇನೆ ಪಕ್ಷ ಠಾಕ್ರೆ ಕುಟುಂಬದಿಂದ ಅಧಿಕೃತವಾಗಿ ಕೈಜಾರಿದಂತಾಗಿದೆ.
ಬಾಳಾ ಸಾಹೇಬ್ ಠಾಕ್ರೆ ರಾಜಕೀಯ ಬಳುವಳಿ ಮುಂದುವರಿಸುವ ಜವಾಬ್ದಾರಿ ಹೊತ್ತರೂ ಬಿಜೆಪಿ ಜತೆ ಮುನಿಸಿಕೊಂಡು ಕಾಂಗ್ರೆಸ್-ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡು ಸಿಎಂ ಕುರ್ಚಿಗೇರಿದ್ದ ಉದ್ಧವ್ ಠಾಕ್ರೆ, ಎರಡೇ ವರ್ಷದಲ್ಲಿ ಸರ್ಕಾರವನ್ನು ಕಳೆದುಕೊಳ್ಳುವ ಜತೆಗೆ ಈಗ ಶಿವಸೇನೆ ಪಕ್ಷದ ಚಿಹ್ನೆಯನ್ನೂ ಕಳೆದು ಕೊಂಡಿದ್ದಾರೆ.
ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವೆ ಎಂದು ಉದ್ಧವ್ ಹೇಳಿದ್ದರೂ, ಸುಪ್ರೀಂಕೋರ್ಟ್ ವಿಚಾರಣೆ ಯಲ್ಲಿ ಚುನಾವಣಾ ಆಯೋಗ ನೀಡುವ ಅಭಿಪ್ರಾಯ ನಿರ್ಣಾಯಕ ಪಾತ್ರವಹಿಸುತ್ತದೆ ಎನ್ನುವುದು ವಾಸ್ತವ. ಹೀಗಾಗಿ, ಉದ್ಧವ್ ಠಾಕ್ರೆಗೆ ಪಾಲಿಗಿದು ದೊಡ್ಡ ರಾಜಕೀಯ ಹಿನ್ನಡೆಯೇ ಸರಿ. ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಒಳಗೊಂಡ ಮಹಾ ಅಘಾಡಿ (ಮಹಾಮೈತ್ರಿ) ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ ಶಿಂಧೆ, ಬಿಜೆಪಿಯ ವ್ಯವಸ್ಥಿತ ಕಾರ್ಯಾಚರಣೆಯ ಭಾಗವಾಗಿ ಕಳೆದ ಜೂನ್ ತಿಂಗಳಲ್ಲಿ ಸರ್ಕಾರದಿಂದ ಹೊರಬಂದು ತಮ್ಮ ನೇತೃತ್ವದ ಶಿವಸೇನೆ ಮೂಲಕ ಮಹಾ ಅಘಾಡಿ ಸರ್ಕಾರ ಪತನಗೊಳಿಸಿದ್ದರು.