ಬೆಳಗಾವಿ: ಕೃಷ್ಣಾ ಮತ್ತು ಘಟಪ್ರಭಾ ನದಿ ತಟದಲ್ಲಿರುವ ಚಿಕ್ಕೋಡಿ ಭಾಗದ ಎಂಟು ವಿಧಾನಸಭಾ ಕ್ಷೇತ್ರಗಳು ರಾಜ್ಯ ರಾಜಕಾರಣದಲ್ಲಿ ಬಹಳ ಪ್ರಭಾವ ಹೊಂದಿರುವ ಕ್ಷೇತ್ರಗಳು. ಈ ಎಂಟು ಕ್ಷೇತ್ರಗಳಲ್ಲಿ ಪಕ್ಷ ಪಕ್ಷಗಳ ನಡುವೆ ಕಾದಾಟ ಎನ್ನುವುದಕ್ಕಿಂತ ವೈಯಕ್ತಿಕ ಪ್ರತಿಷ್ಠೆಯ ನಡುವಿನ ಕದನ ಎಂದರೆ ತಪ್ಪಿಲ್ಲ. ವಿಶೇಷ ಎಂದರೆ ಚಿಕ್ಕೋಡಿ ವಿಭಾಗ ಕಾಂಗ್ರೆಸ್, ಬಿಜೆಪಿ, ಜನತಾ ಪಕ್ಷ ಸಹಿತ ಎಲ್ಲ ಪಕ್ಷಗಳಿಗೂ ನೆಲೆ ಒದಗಿಸಿದೆ. ಆರಂಭದ ಚುನಾವಣೆಗಳಲ್ಲಿ ಕಾಂಗ್ರೆಸ್ ಭದ್ರಕೋಟೆ ಸ್ಥಾಪಿಸಿದ್ದರೂ ಈಗ ಅದು ಬಿಜೆಪಿ ವಶವಾಗಿದೆ. ಒಂದೆರಡು ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣ ಬಹಳ ಗಟ್ಟಿಯಾಗಿ ತಳವೂರಿದೆ.
ಕಳೆದ ಚುನಾವಣೆಯಲ್ಲಿ ಅಥಣಿ, ಹುಕ್ಕೇರಿ, ಕಾಗವಾಡ, ಕುಡಚಿ, ರಾಯಬಾಗ, ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಕಾಂಗ್ರೆಸ್ ಚಿಕ್ಕೋಡಿ ಮತ್ತು ಯಮಕನ ಮರಡಿ ಕ್ಷೇತ್ರಗಳಲ್ಲಿ ಮಾತ್ರ ತೃಪ್ತಿಪಟ್ಟಿಕೊಂಡಿತ್ತು. 2008ರಲ್ಲಿ ಉದಯವಾದ ಕುಡಚಿ ಮತ್ತು ಯಮಕನಮರಡಿ ಕ್ಷೇತ್ರಗಳು ಬಿಜೆಪಿ ಹಾಗೂ ಕಾಂಗ್ರೆಸ್ ವಶದಲ್ಲಿರುವುದು ವಿಶೇಷ. ದಾಖಲೆಯ ಎಂಟು ಬಾರಿ ಶಾಸಕರಾಗಿದ್ದ ಉಮೇಶ ಕತ್ತಿ ಈ ವಿಭಾಗದವರು ಎಂಬುದು ಗಮನಿ ಸಬೇಕಾದ ಅಂಶ. ಆದರೆ ಈ ಬಾರಿ ಉಮೇಶ್ ಕತ್ತಿಯವರಿಲ್ಲದೇ ಚುನಾವಣೆ ನಡೆಯುತ್ತಿದೆ.