ನಟರ ಅಬ್ಬರ ಇತ್ತೀಚೆಗೆ ಹೆಚ್ಚಾಗಿದೆ. ಸಿನಿಮಾಕ್ಕೆ ಸಂಬಂಧಿಸದ ಕಾರ್ಯಕ್ರಮಗಳಲ್ಲಿಯೂ ಕೆಲವು ನಟರ ಅಭಿಮಾನಿಗಳು ಕೂಗಾಟ-ಕಿರುಚಾಟ ಮಾಡುವ ಕೆಟ್ಟ ಸಂಪ್ರದಾಯ ಇತ್ತೀಚೆಗೆ ಶುರುವಾಗಿದೆ. ಇದರಿಂದ ಕಾರ್ಯಕ್ರಮ ಆಯೋಜಿಸಿದವರು, ವೇದಿಕೆ ಮೇಲಿದ್ದವರು ಮುಜುಗರಕ್ಕೆ ಒಳಗಾಗುವಂತಾಗಿದೆ.
ದರ್ಶನ್ ಅಭಿಮಾನಿಗಳು ಕೆಲವು ಸಿನಿಮೇತರ ಕಾರ್ಯಕ್ರಮಗಳಲ್ಲಿ ದರ್ಶನ್ ಭಾಗವಹಿಸಿದ್ದಾಗ ಹೀಗೆ ವರ್ತಿಸಿದ್ದರು, ಒಮ್ಮೆಯಂತೂ ದರ್ಶನ್ ಅಭಿಮಾನಿಗಳ ಕೂಗಾಟದ ಹೆಚ್ಚಾದ ಕಾರಣ ಸ್ವತಃ ಸಿಎಂ ಅವರು ಮೈಕ್ ಬಿಟ್ಟು ಹಿಂದೆ ಬಂದುಬಿಟ್ಟಿದ್ದರು. ಈಗ ಸುದೀಪ್ ಅಭಿಮಾನಿಗಳ ಸರದಿ.
ದಾವಣಗೆರೆಯ ಹರಿಹರದ ರಾಜನಹಳ್ಳಿಯಲ್ಲಿ ವಾಕ್ಮೀಕಿ ಜಾತ್ರೆ ನಡೆಯುತ್ತಿದ್ದು, ನಟ ಸುದೀಪ್ ಅವರು ಕಾರ್ಯಕ್ರಮಕ್ಕೆ ಬರುತ್ತಾರೆಂದು ಮೊದಲೇ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು, ಮಾತ್ರವಲ್ಲದೆ, ಬೇರೆ ಕಾರ್ಯಕ್ರಮ ನಡೆಯುವಾಗಲೂ ಸುದೀಪ್ ಅಭಿಮಾನಿಗಳು ನೆಚ್ಚಿನ ನಟನ ಹೆಸರು ಕೂಗಿ ಅರಚಾಟ ಮಾಡಿ ವೇದಿಕೆ ಮೇಲಿದ್ದವರಿಗೆ ಕಿರಿ-ಕಿರಿ ಉಂಟು ಮಾಡಿದರು.
ಕಿಚ್ಚ ಸುದೀಪ್ ಅವರು ಹರಿಹರ ತಾಲೂಕಿನ ರಾಜನಹಳ್ಳಿಗೆ ಬರುತ್ತಾರೆ ಎಂಬ ವಿಚಾರ ತಿಳಿದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳು ಬೆಳಿಗ್ಗೆಯಿಂದಲೂ ಕಿಚ್ಚ ಕಿಚ್ಚ ಘೋಷಣೆ ಹಾಕುತ್ತಲೇ ಇದ್ದರು. ಇದರಿಂದ ಕೆರಳಿದ ವಾಲ್ಮೀಕಿ ಪೀಠಾಧಿಪತಿ ಪ್ರಸನ್ನನಾನಂದ ಸ್ವಾಮೀಜಿ ಅವರು ಗರಂ ಆದ ಘಟನೆ ನಡೆಯಿತು.
”ಏಯ್ ಕುತ್ಕೊಳ್ರೋ. ಸುಮ್ಮನೆ ಕುಳಿತುಕೊಂಡರೆ ಸುದೀಪ್ ಬರುತ್ತಾರೆ. ಗಲಾಟೆ ಮಾಡಿದ್ರೆ ಬರೋದಿಲ್ಲ. ಸುದೀಪ್ ಅವರು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಇದೇ ರೀತಿ ಗಲಾಟೆ ಮುಂದುವರಿಸಿದರೆ ನಾನೇ ಬರುವುದು ಬೇಡ ಎಂದು ಸುದೀಪ್ಗೆ ಹೇಳುತ್ತೇನೆ. ಅವರು ಬರುವವರೆಗೆ ಶಾಂತಿಯಿಂದ ವರ್ತಿಸಬೇಕು. ಗಲಾಟೆ, ಕಿರಿಕಿರಿ ಮಾಡಿದರೆ ಕಾರ್ಯಕ್ರಮ ಕ್ಯಾನ್ಸಲ್ ಮಾಡ್ತೀನಿ ಎಂದು ಸಿಟ್ಟಿನಿಂದಲೇ ಹೇಳಿದರು.