ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದೇ ಒಂದು ರೂಪಾಯಿ ವಿಶೇಷ ಅನುದಾನ ಕೊಟ್ಟಿಲ್ಲ. ಇದೇ ವೇಳೆ ಉತ್ತರದ ರಾಜ್ಯಗಳಿಗೆ ಅನುದಾನದ ಹೊಳೆಯನ್ನೇ ಹರಿಸಿದೆ. ಕೇಂದ್ರಕ್ಕೆ ರಾಜ್ಯದಿಂದ ತೆರಿಗೆ ದುಡ್ಡು ಬೇಕು, ಜನರ ಓಟು ಬೇಕು.
ಆದರೆ, ಅನುದಾನ ಕೊಡಲು ಆಗುವುದಿಲ್ಲವೇ. ಉತ್ತರದ ರಾಜ್ಯಗಳ ಉದ್ಧಾರ ಮಾಡಲು ನಮ್ಮ ರಾಜ್ಯದ ತೆರಿಗೆ ಹಣವೇ’ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
‘ಪ್ರಜಾವಾಣಿ’ ವರದಿ ಸಹಿತ ಟ್ವೀಟ್ ಮಾಡಿರುವ ಅವರು, ‘ವಿಶೇಷ ಅನುದಾನದಲ್ಲಿ ಉತ್ತರದ ರಾಜ್ಯ ಗಳಿಗೆ ಭರಪೂರ ಅನುದಾನ. ಕರ್ನಾಟಕಕ್ಕೆ ಶೂನ್ಯ ಅನುದಾನ. ಯಾಕೇ ಈ ತಾರತಮ್ಯ’ ಎಂದಿದ್ದಾರೆ.
’25 ಜನ ಬಿಜೆಪಿ ಸಂಸದರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದು ಕರ್ನಾಟಕ. ಕೇಂದ್ರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ. ಬಿಜೆಪಿಗೆ ಇಷ್ಟೆಲ್ಲಾ ಕೊಡುಗೆ ಕೊಟ್ಟ ರಾಜ್ಯಕ್ಕೆ ಒಂದೇ ಒಂದು ರೂಪಾಯಿ ವಿಶೇಷ ಅನುದಾನವಿಲ್ಲ. ಕೇಂದ್ರದ ದೃಷ್ಟಿಯಲ್ಲಿ ರಾಜ್ಯಕ್ಕೆ ಏನು ಸ್ಥಾನ? ‘ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ