ಬೆಂಗಳೂರು: ಪಕ್ಷದ ಪರ ಅಲೆ ಎಬ್ಬಿಸಲು ವಿವಿಧ ಕಡೆಗಳಲ್ಲಿ ಯಾತ್ರೆ ನಡೆಸುತ್ತಿರುವ ನಾಯಕರು, ಮತ್ತೊಮ್ಮೆ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದಿರುವ ಎಲ್ಲ ಪಕ್ಷದ ಶಾಸಕರು ಕ್ಷೇತ್ರದಲ್ಲೇ ಬೆವರು ಹರಿಸುತ್ತಿರುವುದರಿಂ
ದಾಗಿ 15 ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕಲಾಪ ನಿಗದಿಯಾದಷ್ಟು ದಿನ ನಡೆಯುವುದೇ ಅನುಮಾನ.
ಈ ಅಧಿವೇಶನ ಮುಗಿದ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಮುಂದೆಯೂ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವ ಸಲುವಾಗಿ ಶಾಸಕರು ಹರಸಾಹಸ ಪಡುತ್ತಿದ್ದು, ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದಾರೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿ
ರುವ ಈ ಅವಧಿಯ ಕೊನೆಯ ಬಜೆಟ್ನಲ್ಲಿ ತಮ್ಮ ಕ್ಷೇತ್ರಗಳಿಗೆ ಯೋಜನೆಗಳು ಘೋಷಣೆಯಾದರೂ ಅನುದಾನ ದಕ್ಕುವುದಿಲ್ಲ. ಒಂದುವೇಳೆ ಹಣ ಬಿಡುಗಡೆಯಾದರೂ ಖರ್ಚು ಮಾಡಲು ನೀತಿ ಸಂಹಿತೆ ಅಡ್ಡಿ ಬರಲಿದೆ. ಹೀಗಾಗಿ, ಕಲಾಪದ ಮೇಲೆ ಬಹುತೇಕ ಶಾಸಕರಿಗೆ ಆಸಕ್ತಿಯೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ.
ಸರ್ಕಾರದ ವೈಫಲ್ಯವನ್ನು ಜನರ ಮುಂದೆ ತೆರೆದಿಡಲು ವಿರೋಧ ಪಕ್ಷದವರಿಗೆ ಇದು ಕೊನೆಯ ಅವಕಾಶ. ಆದರೆ, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ, ಅದರ ಮೇಲೆ ಚರ್ಚೆ ಹಾಗೂ ವಂದನಾ ನಿರ್ಣಯಕ್ಕೆ ಮೊದಲ ವಾರ ಸೀಮಿತವಾಗುತ್ತದೆ. ಫೆ.17ರಂದು ಬೊಮ್ಮಾಯಿ ಅವರು ಬಜೆಟ್ ಮಂಡಿಸಲಿದ್ದು, 20ರಿಂದ 24ವರೆಗೆ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಸರ್ಕಾರದ ‘ಬಂಡವಾಳ’ ಬಿಚ್ಚಿಡಲು ಸಮಯಾವಕಾಶ ಸಿಗದು ಎಂಬ ಕಾರಣಕ್ಕೆ ವಿರೋಧ ಪಕ್ಷಗಳ ನಾಯಕರು ಹೆಚ್ಚಿನ ಉತ್ಸುಕತೆ ತೋರಿಸುತ್ತಿಲ್ಲ