ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಈ ನಡುವೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ #ಆನ್ಸರ್ಮಾಡಿಮೋದಿ ಎಂಬ ಹ್ಯಾಷ್ ಟ್ಯಾಗ್ ನೀಡಿ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಇದು ಚುನಾವಣಾ ಸಂದರ್ಭ ಆಗಿರುವುದರಿಂದ ನರೇಂದ್ರ ಮೋದಿ, ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬರಗಾಲದ ಸಂದರ್ಭ ಮೋದಿ ರಾಜ್ಯದ ನೆರವಿಗೆ ಬರಲಿಲ್ಲ. ಆದರೆ, ಈಗ ಮತ ಕೇಳಲು ಬರುತ್ತಿದ್ದಾರೆ. ಈ ಬಾರಿಯ ಬಜೆಟ್ನಲ್ಲೂ ರಾಜ್ಯಕ್ಕೆ ಯೋಜನೆಗಳನ್ನು ನೀಡಿಲ್ಲ. ಚುನಾವಣೆ ಇದ್ದರೂ ರಾಜ್ಯವನ್ನು ಲಘುವಾಗಿ ಪರಿಗಣಿಸಲಾಗಿದೆ. ಬಿಜೆಪಿ ಸರ್ಕಾರವೇಕೆ ಪ್ರತಿ ಬಾರಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು (ಎಂಎನ್ಆರ್ಇಜಿಎ) ಉದ್ಯೋಗ ಸೃಷ್ಟಿ ದೃಷ್ಟಿಯಿಂದ ವರವಾಗಿದೆ. ಆದರೆ, ಬಿಜೆಪಿ ಸರ್ಕಾರ ಅದಕ್ಕೂ ಕೊಕ್ಕೆ ಹಾಕಿದೆ. ಯೋಜನೆಗೆ ಮೀಸಲಿಟ್ಟಿದ್ದ ನಿಧಿಯನ್ನು ಶೇ. 21.66 ರಷ್ಟು, ₹60,000 ಕೋಟಿ ಕಡಿತಗೊಳಿಸಲಾಗಿದೆ. ನರೇಂದ್ರ ಮೋದಿ ಏಕೆ ಭಾರತದ ಯುವಕರು ನಿರುದ್ಯೋಗಿಗಳಾಗಿರಬೇಕೆಂದು ಬಯಸುತ್ತಿದ್ದಾರೆ? ಯುವಕರು ತಮ್ಮ ಟ್ರೋಲ್ ಏಜೆಂಟ್ಗಳಾಗಿರಲಿ ಎಂದು ಅವರು ಬಯಸುತ್ತಿದ್ದಾರೆಯೇ? ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.