ಬೆಳಗಾವಿ: ಇಲ್ಲಿನ ಶಿವಬಸವ ನಗರದ ಡಾ.ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಸಂಸ್ಥೆ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ 22ನೇ ಅಖಿಲ ಭಾರತ ಕವಯತ್ರಿಯರ ಸಮ್ಮೇಳನ ಸೋಮವಾರ ಸಂಪನ್ನಗೊಂಡಿತು.
ಪಂಜಾಬ್ನ ಅಮೃತಸರದಲ್ಲಿ 23ನೇ ಸಮ್ಮೇಳನ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಪದಾಧಿಕಾರಿಗಳ ಆಯ್ಕೆ: ಆಲ್ ಇಂಡಿಯಾ ಪೋಯಿಟ್ ಕಾನ್ಫರೆನ್ಸ್(ಎಐಪಿಸಿ) ರಾಷ್ಟ್ರೀಯ ಅಧ್ಯಕ್ಷೆಯಾಗಿ ಅಸ್ಸಾಂನ ಮೋನೋಮತಿ ಕುರಮಿ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಕೋಸಗಿ, ಮಂಗಲಾ ಮೆಟಗುಡ್ಡ, ಜ್ಯೋತಿ ಬದಾಮಿ, ಡಾ.ಕೆ.ಪಿ.ಸುಧೀರಾ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಸರೋಜಾ ಜಿ.ಎಸ್. ಅವರನ್ನು ಆಯ್ಕೆ ಮಾಡಲಾಯಿತು.
ಸಾಧಕಿಯರಿಗೆ ಪ್ರಶಸ್ತಿ: ಬೀದರ್ನ ಕಾವ್ಯ ಹನುಮಂತಪ್ಪ ‘ಮಿಸ್ ಟೀನ್’, ಅಸ್ಸಾಂನ ಸೀಮಾ ಬರುವಾ ‘ಮಿಸ್ ಟ್ರಿಪ್ ಹ್ಯಾಟ್ರಿಕ್’, ಮೇಘಾಲಯದ ಜಾಕ್ಲಿನ್ ಮರಾಕ್ ‘ಮಿಸ್ ಬ್ಯೂಟಿ ವಿಥ್ ಬ್ರೇನ್’, ಬೆಳಗಾವಿಯ ಶೈಲಜಾ ಕುಲಕರ್ಣಿ ‘ಮಿಸ್ ಪಾಪ್ಯುಲರ್’, ಆಶಾ ಕಡಪಟ್ಟಿ ‘ಮಿಸ್ ಬೆಳಗಾವಿ-2023’, ಜ್ಯೋತಿ ಕಟ್ಟಿ ‘ಮಿಸ್ ಎಐಪಿಸಿ’, ಆರತಿ ಅಂಗಡಿ ‘ಮಿಸ್ ಕರ್ನಾಟಕ’, ಜ್ಯೋತಿ ಬದಾಮಿ ‘ಮಿಸ್ ಇಂಡಿಯಾ’ ಪ್ರಶಸ್ತಿಗೆ ಭಾಜನರಾದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎಐಪಿಸಿ ಗೌರವ ಸಂಸ್ಥಾಪಕ ಡಾ.ಲಾರಿ ಆಜಾದ್, ‘ಮುಂದಿನ 10 ವರ್ಷಗಳಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು ಮಹಿಳೆಯರೇ ಆಗಿರುತ್ತಾರೆ. ನಮ್ಮಲ್ಲಿ ಈಗ ಪಿತೃಪ್ರಧಾನ ಸಮಾಜ ಮತ್ತು ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಮಾಜ ನಿರ್ಮಾಣವಾಗಲಿದೆ’ ಎಂದರು.