ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೂರು ಮಕ್ಕಳನ್ನು ನೀರಿನ ಸಂಪ್ ಗೆ ಎಸೆದು ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಜರುಗಿದೆ.
ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾ ಗೀತಾ ರಾಮು ಚೌವ್ಹಾಣ (32) ಮಕ್ಕಳನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ತಾಯಿ ಗೀತಾಳಿಂದ ಹತ್ಯೆಯಾದ ಮಕ್ಕಳನ್ನು ಸೃಷ್ಠಿ (6), ಸಮರ್ಥ (4), ಕಿಶನ್ (3) ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಪತಿ ರಾಮು ಜೊತೆ ಜಗಳವಾಡಿದ್ದ ಗೀತಾ, ಪತಿ ರಾಮು ಮಲಗಿದ್ದ ವೇಳೆ ಮೂವರು ಮಕ್ಕಳನ್ನು ನೀರಿನ ಸಂಪ್ ಗೆ ಎಸೆದು, ಬಳಿಕ ಸಂಪ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭಾನುವಾರ ಬೆಳಿಗ್ಗೆ ಏಳುತ್ತಲೇ ಪತಿ ರಾಮು ಮನೆಯಲ್ಲಿ ಮಕ್ಕಳು, ಪತ್ನಿ ಕಾಣದಾದಾಗ ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ತಿಕೋಟಾ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.