ಬೆಂಗಳೂರು: ಬಿಜೆಪಿ ಇಂದು ‘ಸಿದ್ದು ನಿಜಕನಸುಗಳು’ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲು ಮುಂದಾಗಿತ್ತು. ಇದೀಗ ಈ ಪುಸ್ತಕವನ್ನು ಬಿಡುಗಡೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ಹೊರಡಿಸಿ ಆದೇಶಿಸಿದೆ.
ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ‘ಸಿದ್ದು ನಿಜಕನಸುಗಳು’ ಪುಸ್ತಕ ಬಿಡುಗಡೆಯಾಗದಂತೆ ಕೋರ್ಟ್ಗೆ ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದರು.
ಪರಿಶೀಲಿಸಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಿಜೆಪಿ ಹೊರತರಲು ನಿರ್ಧರಿಸಿದ್ದ ಪುಸ್ತಕವನ್ನು ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಲೋಕಾರ್ಪಣೆಗೊಳಿಸಬೇಕಿತ್ತು. ‘ಸಿದ್ದು ನಿಜಕನಸುಗಳು’ ಎಂಬ ಪುಸ್ತಕದ ಮೂಲಕ ಹಲವು ಸೂಕ್ಷ್ಮ ವಿಷಯಗಳನ್ನು ಬಹಿರಂಗಪಡಿಸುವ ಜತೆ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಡುವ ಪ್ರಯತ್ನವನ್ನು ಶ್ಲಾಘಿಸುತ್ತೇನೆ ಎಂದು ಅಶ್ವತ್ಥ ನಾರಾಯಣ್ ಹೇಳಿಕೊಂಡಿದ್ದರು.
ರಂಗಾಯಣದ ಅಡ್ಡಂಡ ಕಾರ್ಯಪ್ಪ ಅವರು ಬರೆದಿದ್ದ ‘ಟಿಪ್ಪು ನಿಜಕನಸುಗಳು’ ಪುಸ್ತಕದ ಶೀರ್ಷಿಕೆಯ ಮಾದರಿಯಲ್ಲೇ ‘ಸಿದ್ದು ನಿಜಕನಸುಗಳು’ ಪುಸ್ತಕ ಹೊರ ತರಲು ಬಿಜೆಪಿ ನಿರ್ಧರಿಸಿತ್ತ. ಸದ್ಯ ಈ ಪುಸ್ತಕಕ್ಕೆ ಕೋರ್ಟ್ ತಡೆಯಾಜ್ಞೆ ಹೊರಡಿಸಿದೆ.
ವಿವಾದದ ಕಾವು ಪಡೆದುಕೊಂಡಿರುವ ‘ಸಿದ್ದು ನಿಜಕನಸುಗಳು’ ಪುಸ್ತಕ ಬಿಡುಗಡೆ ಜಟಾಪಟಿ ವಿಚಾರದ ಬಗ್ಗೆ ಪತ್ರಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸುತ್ತಿದ್ದಂತೆ ಉತ್ತರಿಸಲು ನಿರಾಕರಿಸಿದಂತಹ ಘಟನೆ ನಡೆದಿದೆ.
‘ಸಿದ್ದು ನಿಜಕನಸುಗಳು’ ಪುಸ್ತಕದ ಬಗ್ಗೆ ಪ್ರಶ್ನೆ ಎದುರಾಗದಾ ಸಿದ್ದರಾಮಯ್ಯ, ನೋಡಿ… ಕಾಮಾಲೆ ರೋಗದವರರಿಗೆ ಎಲ್ಲವೂ ಹಳದಿಯಾಗಿ ಕಾಣಿಸುತ್ತದೆ. ಟಿಪ್ಪು ಬಗ್ಗೆ ಖಡ್ಗ ಹಿಡಿದು ಡ್ರೆಸ್ ಹಾಕಿಕೊಂಡವರು ಯಡಿಯೂರಪ್ಪ ಮತ್ತು ಶೋಭ ಕರಂದ್ಲಾಜೆ ಅಲ್ವಾ..? ಟಿಪ್ಪು ಬಗ್ಗೆ ಶೇಖ್ ಆಲಿ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು? ಇದು ಇಬ್ಬಂದಿತನ ಅಲ್ವಾ..? ಪುಸ್ತಕದ ಮೂಲಕ ನನ್ನ ತೇಜೋವದೆ ಮಾಡಲು ಹೊರಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಪುಸ್ತಕ ತರುತ್ತಿದ್ದಾರೆ. ಇದು ಮಾನನಷ್ಟ ಮಾಡುವ ಉದ್ದೇಶ ಎಂದು ಹೇಳಿದ್ದಾರೆ.
‘ಸಿದ್ದು ನಿಜಕನಸುಗಳು’ ಪುಸ್ತಕ ಬಿಡುಗಡೆಯನ್ನು ವಿರೋಧಿಸಿ ಟೌನ್ ಹಾಲ್ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಟೌನ್ ಹಾಲ್ ಮುಂಭಾಗ ಸಾಕಷ್ಟು ಸಂಖ್ಯೆಯ ಪೊಲೀಸರಿದ್ದ, ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆಯಾಗಿದೆ.